ADVERTISEMENT

ಸಂರಕ್ಷಿತ ಅರಣ್ಯದಲ್ಲಿ ದೇವಸ್ಥಾನ ನಿರ್ಮಾಣ

ಬಂಡೀಪುರ ಹುಲಿ ಸಂರಕ್ಷಿತ ವಲಯ; ಹುಲಿಯಮ್ಮನ ದೇವಸ್ಥಾನ ಉದ್ಘಾಟನೆ, ಪರಿಸರವಾದಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 9 ಮೇ 2017, 8:27 IST
Last Updated 9 ಮೇ 2017, 8:27 IST
ಗುಂಡ್ಲುಪೇಟೆ:  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಕಂದಾಯ ಭೂಮಿಯಲ್ಲಿ  ನಿರ್ಮಿಸಿರುವ ಹುಲಿಯಮ್ಮನ ದೇವಸ್ಥಾನ ಸೋಮವಾರ ಉದ್ಘಾಟನೆಗೊಂಡಿತು.
 
‘ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ಕೆಬ್ಬೆಪುರ ಮತ್ತು ಇತರ ಗ್ರಾಮಸ್ಥರು ಈ ದೇವಸ್ಥಾನ ನಿರ್ಮಿಸಿದ್ದಾರೆ. ಕಾಡಿಗೆ ಹತ್ತಿರ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ’ ಎಂದು ಕುರಿತು ವನ್ಯಜೀವಿ, ಪರಿಸರ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. 
 
ಅರಣ್ಯದ ಅಂಚಿನಲ್ಲಿ ಕಟ್ಟಡವನ್ನು ನಿರ್ಮಿಸಲು ಅರಣ್ಯ ಇಲಾಖೆ ಮತ್ತು ಸರ್ಕಾರದ ಮಟ್ಟದಲ್ಲಿ ಅನುಮತಿ ಅಗತ್ಯ. ಆದರೆ, ಇಲ್ಲಿ ಯಾರ ಅನುಮತಿಯನ್ನು ಪಡೆದಂತಿಲ್ಲ. ಮೇಲ್ನೋಟಕ್ಕೆ  ಕಾನೂನು ಉಲ್ಲಂಘನೆಯಾದಂತೆ ಕಾಣುತ್ತದೆ ಎಂಬ ಆರೋಪವೂ ಕೇಳಿಬಂದಿದೆ.
 
ಅರಣ್ಯ ಪಕ್ಕದಲ್ಲಿದ್ದಾಗ ಪ್ರಥಮ ಆದ್ಯತೆ ವನ್ಯಜೀವಿಗಳ ಹಿತಾಸಕ್ತಿ ರಕ್ಷಣೆಗೆ ನೀಡಬೇಕು. ದೇವಸ್ಥಾನ ಸಮೀಪವುಳ್ಳ ಕೆರೆಯು ಬಂಡೀಪುರದ ಪೂರ್ವ ಭಾಗದಲ್ಲಿ ಕಾಡು ಪ್ರಾಣಿಗಳಿಗೆ ನೀರಿನ ಮೂಲವಾಗಿದೆ. ಕೆರೆ ಮಣ್ಣನ್ನು ತೆಗೆದು ದಾರಿ ಮಾಡಿದ್ದು, ಸಮಸ್ಯೆಗೆ ಕಾರಣವಾಗಲಿದೆ ಎಂಬ ಆತಂಕವನ್ನು ಪರಿಸರ ಪ್ರಿಯರು ವ್ಯಕ್ತಪಡಿಸಿದ್ದಾರೆ.
 
ಹುಲಿ ಸಂರಕ್ಷಣಾಧಿಕಾರಿ ಆಗಿದ್ದ ಮಲ್ಲೇಶ್ ಎರಡು ವರ್ಷಗಳ ಹಿಂದೆ ದೇವಸ್ಥಾನದ ಅನಧಿಕೃತ ನಿರ್ಮಾಣ ತಡೆದಿದ್ದರು. ಅವರ ನಂತರದ ಅಧಿಕಾರಿಗಳು ಈ ಕುರಿತು ಗಮನಹರಿಸಲಿಲ್ಲ. ಇದೀಗ ದೇವಸ್ಥಾನ ತಲೆಎತ್ತಿನಿಂತಿದೆ.  
 
ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ಭಕ್ತರು ಪ್ರಸಾದ ಮತ್ತು ಪಾನೀಯ ಸೇವಿಸಿ ಎಲೆ ಮತ್ತು ಪ್ಲಾಸ್ಟಿಕ್ ಲೋಟಗಳನ್ನು ಅಲ್ಲಲ್ಲೇ ಎಸೆದಿದ್ದರು. ಅಲ್ಲದೆ, ಕಾಡಿನಲ್ಲಿ ಧ್ವನಿವರ್ಧಕವನ್ನೂ ಬಳಕೆ ಮಾಡಲಾಗಿತ್ತು. ಆದಾಗ್ಯೂ ಅರಣ್ಯ ಇಲಾಖೆ ಸಿಬ್ಬಂದಿ ಗಮನಹರಿಸಿಲ್ಲ.  
 
ನಿರ್ಮಾಣದಿಂದ ಅಪಾಯ?: ದೇವಸ್ಥಾನ ನಿರ್ಮಾಣದ ಆಸುಪಾಸಿನಲ್ಲಿ ಕೆರೆಗಳು ಇಲ್ಲ. ಇದ್ದ ಒಂದೇ ಕೆರೆ ಬರಕಟ್ಟೆ. ಇದು ಕಾಡುಪ್ರಾಣಿಗಳಿಗೆ ನೀರಿನ ಮೂಲವಾಗಿತ್ತು.
 
ಈಗ ದೇವಸ್ಥಾನ ನಿರ್ಮಾಣವಾಗಿ, ಜನಸಂಚಾರ ಇರುವ ಕಾರಣ ವನ್ಯಜೀವಿಗಳಿಗ ಸಮಸ್ಯೆಯಾಗಬಹುದು. ಪ್ರಾಣಿ ಮತ್ತು ಮನುಷ್ಯನ ಸಂಘರ್ಷ ಪ್ರಕರಣ ಹೆಚ್ಚಬಹುದು. ದೇಗುಲಕ್ಕೆ ವಿದ್ಯುತ್ ಸಂಪರ್ಕಕ್ಕೆ 10 ವಿದ್ಯುತ್ ಕಂಬ ನೆಟ್ಟು ತಂತಿ ಎಳೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.