ಹುಬ್ಬಳ್ಳಿ: ಪತ್ನಿಯ ಸಾವಿನ ಸುದ್ದಿ ಕೇಳಿದ ಪತಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ಕೋಳಿವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ನೀಲವ್ವ (65) ಮತ್ತು ಅವರ ಪತಿ ದೇವೇಂದ್ರಪ್ಪ ಗುದ್ದೀನ (71) ಸಾವಿನಲ್ಲೂ ಒಂದಾದ ದಂಪತಿ. ನೀಲವ್ವ ಅವರಿಗೆ ರಕ್ತದೊತ್ತಡ ಕಡಿಮೆ ಇತ್ತು. ಹೀಗಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲಿಯೇ ರಾತ್ರಿ 10.30ಕ್ಕೆ ಮೃತಪಟ್ಟರು. ಪತ್ನಿಯ ಸಾವಿನಿಂದ ಆಘಾತಕ್ಕೀಡಾದ ಪತಿ ರಾತ್ರಿ 11ಕ್ಕೆ ಕೊನೆಯುಸಿರು ಎಳೆದರು.
‘ಹಲವು ದಿನಗಳಿಂದ ಹೆಂಡತಿಗೆ ಚಿಕಿತ್ಸೆ ಕೊಡಿಸುತ್ತಿದ್ದ ದೇವೇಂದ್ರಪ್ಪ ಅವರಿಗೆ ಪತ್ನಿಯ ಸಾವಿನ ಸುದ್ದಿ ಬರಸಿಡಿಲು ಎರಗಿದಂತಾಗಿಯಿತು. ಈ ಆಘಾತದಿಂದ ಚೇತರಿಸಿಕೊಳ್ಳಲು ದೇವಪ್ಪ ಅವರಿಗೆ ಆಗಲಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.
ದಂಪತಿ ಸಾವಿನ ಸುದ್ದಿ ತಿಳಿದ ಊರಿನವರು ಶುಕ್ರವಾರ ತಂಡೋಪತಂಡವಾಗಿ ಅವರ ಮನೆಗೆ ತೆರಳಿ, ದಂಪತಿಯ ಅಂತಿಮ ದರ್ಶನ ಪಡೆದರು.
ಈ ದಂಪತಿಗೆ ಬಸವರಾಜ ಎಂಬ ಅಂಗವಿಕಲ ಮಗನಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.