ಔರಾದ್: ‘ಸಾಮಾಜಿಕ ಜಾಲ ತಾಣಗಳ ಮೂಲಕ ಶಾಸಕ ಪ್ರಭು ಚವಾಣ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತೀಶ ಪಾಟೀಲ ದೂರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ‘ಶಾಸಕರ ಏಳಿಗೆ ಸಹಿಸದ ಕೆಲವರು ವಾಟ್ಸ್ ಆ್ಯಪ್ ಮತ್ತು ಫೇಸ್ಬುಕ್ ಮೂಲಕ ಸುಳ್ಳು ಸುದ್ದಿಗಳು ಹರಡಿಸುತ್ತಿದ್ದಾರೆ.
ಶಾಸಕರು ದೆಹಲಿಗೆ ಹೋಗುವಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರ ಬಳಿಯ ಗನ್ ಜಪ್ತಿ ಮಾಡಿಕೊಂಡು ಬಂಧಿಸಲಾಗಿದೆ ಎಂಬ ಸುಳ್ಳು ಸುದ್ದಿ ಹರಿ ಬಿಡಲಾಗಿದೆ. ಇದಕ್ಕೆ ಹೊರತುಪಡಿಸಿ ಶಾಸಕರನ್ನು ಅವಮಾನಿಸುವ ಮತ್ತು ಅವರ ತೇಜೋವಧೆ ಮಾಡುವ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ.
ಈ ಕುರಿತು ಸೈಬರ್ ಪೊಲೀಸರ ಜತೆ ಚರ್ಚಿಸಿ ಅಂತವರ ವಿರುದ್ಧ ದೂರು ನೀಡಲಾಗುವುದು. ತಾಲ್ಲೂಕಿನ ಜನ ಇಂತಹ ಯಾವುದೇ ಅಪಪ್ರಚಾರ ಮತ್ತು ಗಾಳಿ ಸುದ್ದಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದ್ದಾರೆ.
ಔರಾದ್: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಔರಾದ್ನಿಂದ ಬೆಂಗಳೂರಿಗೆ ನೂತನವಾಗಿ ಆರಂಭಿಸಿರುವ ಹೊಸ ಬಸ್ ಸೇವೆಗೆ ಗುರುವಾರ ಶಾಸಕ ಪ್ರಭು ಚವಾಣ್ ಚಾಲನೆ ನೀಡಿದರು. ಪ್ರತಿದಿನ ಮಧ್ಯಾಹ್ನ ಔರಾದ್ನಿಂದ ಹೊರಡುವ ಈ ಹವಾನಿಯಂತ್ರಿತ ವಲ್ಲದ (ನಾನ್ ಎ.ಸಿ) ಈ ಬಸ್ ಬೀದರ್– ಹೈದರಾಬಾದ್ ಮೂಲಕ ಬೆಂಗಳೂರು ತಲುಪಲಿವೆ.
ಈ ವೇಳೆ ಮಾತನಾಡಿದ ಅವರು ‘ಈ ತಾಲ್ಲೂಕು ಮೂರು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಸೇವೆ ಅಗತ್ಯವಾಗಿದೆ. ಇಲ್ಲಿಂದ ಮುಂಬೈ, ಪುಣೆ ನಾಂದೇಡ್ಗೆ ರಾಜಹಂಸ ಬಸ್ ಸೇವೆಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಸದ್ಯ ಎರಡು ಬಸ್ ಮಾತ್ರ ನೀಡಿದ್ದಾರೆ’ ಎಂದು ಹೇಳಿದರು.
ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿ ಚಂದ್ರಕಾಂತ ಫುಲೆಕರ್, ಧೂಳಪ್ಪ, ಘಟಕ ವ್ಯವಸ್ಥಾಪಕ ಮಹಮ್ಮದ್ ನಯೀಮ್, ಬಂಡೆಪ್ಪ ಕಂಟೆ, ಸತೀಶ ಪಾಟೀಲ, ಶರಣಬಸವ ಸಾವಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.