ADVERTISEMENT

ಅನಾಥ ಭಾವ; ಬಿಕ್ಕಿ ಬಿಕ್ಕಿ ಅತ್ತ ಭಕ್ತರು

ಡಾ.ಮಹಾಂತ ಶ್ರೀಗಳ ಅಗಲಿಕೆಗೆ ಶೋಕಸಾಗರ, 50 ಸಾವಿರ ಜನರಿಂದ ಅಂತಿಮ ದರ್ಶನ

​ಪ್ರಜಾವಾಣಿ ವಾರ್ತೆ
Published 21 ಮೇ 2018, 11:38 IST
Last Updated 21 ಮೇ 2018, 11:38 IST
ಇಳಕಲ್‌ನಲ್ಲಿ ಲಿಂಗೈಕ್ಯ ಮಹಾಂತ ಶ್ರೀಗಳ ಪಾರ್ಥಿವ ಶರೀರಕ್ಕೆ ಭಸ್ಮಧಾರಣೆ ಮಾಡಿ, ಮಾಲಾರ್ಪಣೆ ಮಾಡಿ ಅಂತಿಮ ದರ್ಶನ ಪಡೆದ ಮಾತೆ ಮಹಾದೇವಿ
ಇಳಕಲ್‌ನಲ್ಲಿ ಲಿಂಗೈಕ್ಯ ಮಹಾಂತ ಶ್ರೀಗಳ ಪಾರ್ಥಿವ ಶರೀರಕ್ಕೆ ಭಸ್ಮಧಾರಣೆ ಮಾಡಿ, ಮಾಲಾರ್ಪಣೆ ಮಾಡಿ ಅಂತಿಮ ದರ್ಶನ ಪಡೆದ ಮಾತೆ ಮಹಾದೇವಿ   

ಇಳಕಲ್ : ಲಿಂಗೈಕ್ಯ ಡಾ.ಮಹಾಂತ ಶ್ರೀಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 9ಗಂಟೆ ಇಲ್ಲಿಯ ವಿಜಯ ಮಹಾಂತೇಶ್ವರ ಕತೃ ಗದ್ದುಗೆ ಆವರಣದಲ್ಲಿ ನೆರವೇರಲಿದೆ.

ಗದುಗಿನ ತೋಂಟದ ಡಾ.ಸಿದ್ದಲಿಂಗ ಸ್ವಾಮೀಜಿ, ಚಿತ್ರದುರ್ಗದ ಮುರುಘಾ ಶರಣರು ಹಾಗೂ ನಾಡಿನ ನೂರಾರು ಶ್ರೀಗಳ ನೇತೃತ್ವದಲ್ಲಿ ಬಸವತತ್ವದಂತೆ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನೆರವೇರಲಿವೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಸವದಿಯ ಸಂಗನಬಸವ ಮಠ ಹಾಗೂ ಚಿತ್ತರಗಿ ಮೂಲಪೀಠದಿಂದ ಭಾನುವಾರ ಬೆಳಗಿನ ಜಾವ 5ಗಂಟೆಗೆ ಶ್ರೀಮಠಕ್ಕೆ ಶ್ರೀಗಳ ಪಾರ್ಥಿವ ಶರೀರ ತರಲಾಯಿತು. ಸೇರಿದ್ದ ಶ್ರೀಮಠದ ನೂರಾರು ಪರಮ ಸದ್ಭಕ್ತರು ಪೂಜ್ಯರ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ’ಅನಾಥರಾದೆವು’ ಎಂದು ಬಿಕ್ಕಿ ಬಿಕ್ಕಿ ಅತ್ತರು. ಗುರುಮಹಾಂತ ಶ್ರೀಗಳು ಭಕ್ತರ ದುಃಖದಲ್ಲಿ ಭಾಗಿಯಾಗಿ ಕಣ್ಣೀರಾದರು. ನಾಡಿನ 500ಕ್ಕೂ ಹೆಚ್ಚು ಸ್ವಾಮೀಜಿಗಳು, ನೂರಾರು ಸಾಹಿತಿಗಳು, ಜನಪ್ರತಿನಿಧಿಗಳು ಅಂತಿಮ ದರ್ಶನ ಮಾಡಿದರು.

ADVERTISEMENT

11ಗಂಟೆಯವರೆಗೆ ಭಕ್ತರು ಶ್ರೀಮಠದಲ್ಲಿ ಪೂಜ್ಯರ ಅಂತಿಮ ದರ್ಶನ ಪಡೆದರು. ನಂತರ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆ ನೂಕು ನುಗ್ಗಲು ತಪ್ಪಿಸಲು ಪಾರ್ಥಿವ ಶರೀರವನ್ನು ಆರ್.ವೀರಮಣಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಸರದಿಯಲ್ಲಿ ನಿಂತು ಸಾವಿರಾರು ಭಕ್ತರು ಅಂತಿಮವಾಗಿ ಪೂಜ್ಯರನ್ನು ಕಣ್ತುಂಬಿಕೊಂಡರು.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಧರ್ಮ ಪೀಠದ ಮಾತೆ ಮಹಾದೇವಿ, ಹುಬ್ಬಳ್ಳಿಯ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ. ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ಶ್ರೀಗಳು, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಹೂವಿನಹಡಗಲಿಯ ಗುರುಶಾಂತ ಸ್ವಾಮೀಜಿ, ಗುಳೇದಗುಡ್ಡದ ಬಸವಾರ್ಯ ಪಟ್ಟದೇವರು, ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ನಂದವಾಡಗಿಯ ಮಹಾಂತಲಿಂಗ ಶ್ರೀಗಳು, ಬಾಗಲಕೋಟೆಯ ರಾಮಾರೂಢ ಶ್ರೀಗಳು, ಜೇರಟಗಿ ಮಹಾಂತ ಶ್ರೀಗಳು, ಮುದಗಲ್ ಮಹಾಂತ ಶ್ರೀಗಳು, ಲಿಂಗಸೂರಿನ ಸಿದ್ದಲಿಂಗ ಸ್ವಾಮೀಜಿ, ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ, ಚಳಗೇರಿಯ ಶ್ರೀಗಳು, ಅಂಕಲಿಮಠದ ಶ್ರೀಗಳು, ಬೀದರಿನ ಭಂತೇ ಸಂಘಪಾಲರು ಸೇರಿದಂತೆ ನಾಡಿನ 500ಕ್ಕೂ ಮಠಾಧೀಶರು ಅಂತಿಮ ದರ್ಶನ ಪಡೆದರು.

ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಗಿರಿರಾಜ ಹೊಸಮನಿ, ಡಾ.ಬಿ.ವಿ.ಶಿರೂರ, ಡಾ.ಶಂಭು ಬಳಿಗಾರ ಪೂಜ್ಯರಿಗೆ ನುಡಿನಮನ ಸಲ್ಲಿಸಿದರು.

ಶಾಸಕರಾದ ದೊಡ್ಡನಗೌಡ ಪಾಟೀಲ, ಎಂ.ಬಿ. ಪಾಟೀಲ, ವೀರಣ್ಣ ಚರಂತಿಮಠ, ಸಿದ್ದು ಸವದಿ, ಎಸ್.ಆರ್. ಪಾಟೀಲ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಕುಷ್ಟಗಿಯ ಶರಣಪ್ಪ ವಕೀಲರು, ಮುಂಡರಗಿ ಎಸ್‌.ಎಸ್‌. ಪಾಟೀಲ, ಉಮಾದೇವಿ ಎಂ. ಕಲಬುರ್ಗಿ, ಎಸ್‌.ಆರ್‌. ನವಲಿಹಿರೇಮಠ, ಪ್ರಕಾಶ ತಪಶೆಟ್ಟಿ ಸೇರಿದಂತೆ ನೂರಾರು ಜನಪ್ರತಿನಿಧಿಗಳು ಅಂತಿಮ ದರ್ಶನ ಪಡೆದರು.

ಶ್ರೀಮಠದ 64 ಶಾಖಾ ಮಠಗಳು ಸೇರಿ ರಾಜ್ಯದ ವಿವಿಧ ಭಾಗಗಳಿಂದ 50ಕ್ಕೂ ಸಾವಿರಕ್ಕೂ ಅಧಿಕ ಭಕ್ತರು ಸೇರಿದ್ದರು. ಅಂತಿಮ ದರ್ಶನದ ವ್ಯವಸ್ಥೆಯಲ್ಲಿ ಬಸವ ಕೇಂದ್ರ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ವಿಜಯ ಮಹಾಂತೇಶ ತರುಣ ಸಂಘ, ಬಸವ ಯುವ ಬಳಗ, ಅಕ್ಕನ ಬಳಗ ಹಾಗೂ ನಗರದ ಸಂಘ ಸಂಸ್ಥೆಗಳು ಸದಸ್ಯರು ತೊಡಗಿಸಿಕೊಂಡಿದ್ದರು. ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಬಂದೋಬಸ್ತ್‌ಗಾಗಿ ಜಿಲ್ಲೆಯ ವಿವಿಧ ಠಾಣೆಗಳ ಇಬ್ಬರು ಸಿಪಿಐ, ನಾಲ್ವರು ಪಿಎಸ್ಐ, 100 ಕ್ಕೂ
ಹೆಚ್ಚು ಪೊಲೀಸ್ ಸಿಬ್ಭಂದಿ ನಿಯೋಜಿಸಲಾಗಿದೆ.

ಮಹಾಂತ ಶ್ರೀಗಳ ಅಂತಿಮ ದರ್ಶನ

ಹುನಗುಂದ: ಭಾನುವಾರ ರಾತ್ರಿ 1ಕ್ಕೆ ಪಟ್ಟಣದ ಶ್ರೀಮಠಕ್ಕೆ  ಶ್ರೀಗಳ ಪಾರ್ಥಿವ ಶರೀರ ಬರುತ್ತಿದ್ದಂತೆ ಭಕ್ತಸಾಗರ  ದುಃಖದಲ್ಲಿ ಮುಳುಗಿತು.

ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಪೀಠದ ಸ್ವಾಮೀಜಿ, ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ, ಗುಳೇದಗುಡ್ಡದ ಬಸವ ದೇವರು ಮತ್ತು ಹರಗುರು ಚರಮೂರ್ತಿಗಳು
ಇದ್ದರು. ನಗರದ ಚನ್ನಮ್ಮ ವೃತ್ತ, ಲಿಂಗದಕಟ್ಟಿ, ಸಂಗಮೇಶ್ವರ ದೇವಸ್ಥಾನ, ತರಕಾರಿ ಮಾರುಕಟ್ಟೆ, ಮಹಾಂತ ವೃತ್ತ ಮತ್ತು ಬಸ್ ನಿಲ್ದಾಣ ಮಾರ್ಗದಲ್ಲಿ ಸಂಚರಿಸಿ ಇಳಕಲ್‌ಗೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.