ADVERTISEMENT

ಆಡಳಿತ ಭವನ; ಹವಾನಿಯಂತ್ರಿತ ಸಭಾಂಗಣ

ಬಸವರಾಜ ಸಂಪಳ್ಳಿ
Published 21 ಏಪ್ರಿಲ್ 2014, 6:59 IST
Last Updated 21 ಏಪ್ರಿಲ್ 2014, 6:59 IST
ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದಲ್ಲಿ ನವೀಕರಣಗೊಂಡಿರುವ ಹವಾನಿಯಂತ್ರಿತ ಸಭಾಂಗಣದ ಒಳನೋಟ.
ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನದಲ್ಲಿ ನವೀಕರಣಗೊಂಡಿರುವ ಹವಾನಿಯಂತ್ರಿತ ಸಭಾಂಗಣದ ಒಳನೋಟ.   

ಬಾಗಲಕೋಟೆ: ನವನಗರದ ಜಿಲ್ಲಾಡಳಿತ ಭವನದಲ್ಲಿ ಪಾಳುಬಿದ್ದಿದ್ದ ಬೃಹತ್‌ ಸಭಾಂಗಣ­ವನ್ನು ನವೀಕರಣ ಮಾಡಲಾಗಿದ್ದು, ಉದ್ಘಾಟನೆ­ಗೆ ಸಜ್ಜುಗೊಂಡಿದೆ.

ಅಂದಾಜು ರೂ. 25 ಲಕ್ಷ ಮೊತ್ತದಲ್ಲಿ ಸಭಾಂಗಣ­­ವನ್ನು ನವೀಕರಿಸಿ, ಸಂಪೂರ್ಣ ಹವಾನಿಯಂತ್ರಣಗೊಳಿಸಲಾಗಿದೆ. ವಿಡಿಯೋ ಪ್ರದರ್ಶನಕ್ಕೆ ಬೃಹತ್‌ ಪರದೆಯನ್ನು ಅಳವಡಿಸಲಾಗಿದೆ.

ಸರ್ಕಾರಿ ಸಭೆ, ಕಾರ್ಯಕ್ರಮಗಳು ನಡೆಯಲು ಇದರಿಂದ ಅನುಕೂಲವಾಗಿದ್ದು, ಒಮ್ಮೆಗೆ 300ಕ್ಕೂ ಅಧಿಕ ಜನ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. 

2003ರಲ್ಲಿ ನಿರ್ಮಾಣವಾಗಿದ್ದ ಈ ಬೃಹತ್‌ ಸಭಾಂಗಣದಲ್ಲಿ ಈ ಮೊದಲು ಯಾವುದೇ ಸಭೆ, ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಕಾರಣ ಸಭಾಂಗಣ ಪಾಳುಬಿದ್ದಿತ್ತು. ಸರಿಯಾದ ಗಾಳಿ, ಧ್ವನಿ, ಬೆಳಕಿನ ವ್ಯವಸ್ಥೆ ಇರಲಿಲ್ಲ.

ಇದನ್ನು ಮನಗಂಡ ಹಾಲಿ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಹೆಚ್ಚಿನ ಆಸಕ್ತಿ ವಹಿಸಿ ಸಭಾಂಗಣವನ್ನು ಆಧುನಿಕರಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ಇದೀಗ ಸಭಾಂಗಣವನ್ನು ವೈಜ್ಞಾನಿಕವಾಗಿ ನವೀಕರಣ ಮಾಡಲಾಗಿದ್ದು, ಧ್ವನಿ ಪ್ರತಿಧ್ವನಿಸ­ದಂತೆ ವ್ಯವಸ್ಥೆ ಮಾಡಲಾಗಿದೆ, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆಕರ್ಷಕ ಸುಣ್ಣ–ಬಣ್ಣವನ್ನು ಹಚ್ಚಲಾಗಿದೆ. ವಿಡಿಯೋ ಪ್ರದರ್ಶನಕ್ಕೆ ಆತ್ಯಾಧುನಿಕ ಪರದೆ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ ನೌಕರರಿಗೆ ತರಬೇತಿ, ಕಾರ್ಯಾ­ಗಾರ, ವಿಚಾರ ಸಂಕಿರಣ, ಪ್ರಗತಿಪರಿಶೀಲನಾ ಸಭೆ, ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಮತ್ತಿತ­ರರ ಕಾರ್ಯಕ್ರಮ ನಡೆಸಲು ಸಭಾಂಗಣ ಅನುಕೂಲವಾಗಲಿದೆ.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇದುವರೆಗೆ ಸರ್ಕಾರಿ ಸಭೆ, ಸಮಾರಂಭ ಮಾಡಲಾಗುತ್ತು, 50 ಜನ ಕೂರಲು ಸಾಧ್ಯವಾಗದಷ್ಟು ಚಿಕ್ಕ ಸಭಾಂಗಣವಾಗಿದ್ದ ಕಾರಣ ಅನಾನು­ಕೂಲವಾಗುತ್ತಿತ್ತು. ಅದರಲ್ಲೂ ತರಬೇತಿ, ಪ್ರಗತಿ ಪರಿಶೀಲನಾ ಸಭೆಯಂತಹ ಕಾರ್ಯಕ್ರಮ ನಡೆಸಲು ಅಧಿಕಾರಿಗಳು ಪರದಾಡಬೇಕಾಗಿತ್ತು. ಇದೀಗ ಹೊಸ ಸಭಾಂಗಣದಿಂದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

ಭವನ ಸುಧಾರಣೆ: ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮನೋಜ್‌ ಜೈನ್‌, ಸರ್ಕಾರಿ ಸಭೆ, ಸಮಾರಂಭ ನಡೆಸಲು ಸಭಾಂಗಣದ ಕೊರತೆ ಇತ್ತು. ಈ ಹಿನ್ನಲೆಯಲ್ಲಿ ಪಾಳುಬಿದ್ದಿದ್ದ ಸಭಾಂಗಣವನ್ನು ಆಧುನಿಕರಣ ಮಾಡಲಾಗಿದೆ ಎಂದರು.

ಜತೆಗೆ ಜಿಲ್ಲಾಡಳಿತ ಭವನದಲ್ಲಿ ಕಾರ್ಯ­ನಿರ್ವ­ಹಿಸುವ ಸಿಬ್ಬಂದಿಗೆ ಅಗತ್ಯ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 500 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದ್ದು,

ಇದರಿಂದ ಸರ್ಕಾರಿ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ­ವಾದಂತಾಗಿದೆ ಎಂದು ಹೇಳಿದರು.

ಮಳೆಗಾಲದಲ್ಲಿ ಸೋರುತ್ತಿದ್ದ ಜಿಲ್ಲಾಡಳಿತ ಭವನದ ಮೇಲ್ಛಾವಣೆಯನ್ನು ಕೂಡ ದುರಸ್ತಿ­ಗೊಳಿಸಲಾಗಿದೆ. ಜಿಲ್ಲಾಡಳಿತ ಭವನದ ಸುತ್ತಲೂ ಹಾಳಾಗಿದ್ದ ರಸ್ತೆಗಳನ್ನೂ ಸಹ ದುರಸ್ತಿ­ಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.