ADVERTISEMENT

ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿ

ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ: ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 5:48 IST
Last Updated 24 ಏಪ್ರಿಲ್ 2018, 5:48 IST

ಹುನಗುಂದ: ‘ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡುವುದೇ ನಮ್ಮ ಗುರಿ. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಪರಿಣಾಮ ನಮ್ಮ ಗೆಲುವು ನಿಶ್ಚಿತ’ ಎಂದು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಹೇಳಿದರು.

ಸೋಮವಾರ ಮಧ್ಯಾಹ್ನ 1.30ಕ್ಕೆ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ, ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಬಿಜೆಪಿ ಬಂಡಾಯ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಸಲು ಪ್ರಯತ್ನ ನಡೆದಿದೆಯೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೊಡ್ಡನಗೌಡರು, ಪಕ್ಷೇತರ ಅಭ್ಯರ್ಥಿ ನಿಲ್ಲದಂತೆ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಆದರೆ, ಬಂಡಾಯದಿಂದ ನಮಗೆ ತೊಂದರೆಯಿಲ್ಲ. ಇದರಿಂದ ಕಾಂಗ್ರೆಸ್ ದುರಾಡಳಿತವೇ ದೂಳೀಪಟವಾಗಲಿದೆ. ನೀರಾವರಿ, ಕುಡಿಯುವ ನೀರು, ನೇಕಾರರ, ರೈತರ ಪ್ರಗತಿ ಉದ್ದೇಶ ನನ್ನದಾಗಿದೆ’ ಎಂದರು.

ಒಂದೇ ದಿನ ಎರಡು ಬಾರಿ ನಾಮಪತ್ರ: ಮೆರವಣಿಗೆಯ ಮೊದಲು ಸಂಪ್ರದಾಯ ದಂತೆ ಪಂಚಾಂಗ ಮುಹೂರ್ತದ ಸಮಯದಂತೆ ನಾಮಪತ್ರದ ಒಂದು ಪ್ರತಿ ಸಲ್ಲಿಸಿದ ದೊಡ್ಡನಗೌಡ ಪಾಟೀಲ, ನಂತರ ವಿಜಯ ಮಹಾಂತೇಶ ಶಿಕ್ಷಣ ಸಂಸ್ಥೆ ಆವರಣದಿಂದ ಪ್ರಾರಂಭಿಸಿ, ವಿಮ ವೃತ್ತ, ಬಸ್ ನಿಲ್ದಾಣ,ಅಮರಾವತಿ ಕ್ರಾಸ್, ಚಿತ್ತವಾಡಗಿ ಕ್ರಾಸ್ ಮೂಲಕ ಮಿನಿವಿಧಾನಸೌಧಕ್ಕೆ ಮೆರವಣಿಗೆಯಲ್ಲಿ ಆಗಮಿಸಿ ಮತ್ತೊಂದು ನಾಮಪತ್ರ ಸಲ್ಲಿಸಿದರು.

ADVERTISEMENT

ಬಿಜೆಪಿ ಧ್ವಜ ಹಿಡಿದಿದ್ದ ಕಾರ್ಯಕರ್ತರು ದೊಡ್ಡನಗೌಡರ ಪರವಾಗಿ ಜೈಕಾರ ಹಾಕಿದರು. ದೊಡ್ಡನಗೌಡ ಪಾಟೀಲ
ರನ್ನು ಮೇಲೆತ್ತಿ ಸಂಭ್ರಮಿಸಿದರು. ಅವಳಿ ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಜಿ.ಪಂ. ಸದಸ್ಯ ವೀರೇಶ ಉಂಡೋಡಿ, ಡಾ.ಮಹಾಂತೇಶ ಕಡಪಟ್ಟಿ, ದುರ್ಗೇಶ್‌ ಸುರಪೂರ, ಶೋಭಾ ಅಮದಿಹಾಳ, ಭಾರತಿ ದೇಸಾಯಿ, ಶ್ರೀಮಂತ ಧನಂಜಯ ಸರ್ದೇಸಾಯಿ, ಪುತ್ರ ರಾಜು ಪಾಟೀಲ, ಅಜ್ಜಪ್ಪ ನಾಡಗೌಡ್ರ, ಮುಕ್ಕಣ್ಣ ಮುಕ್ಕಣ್ಣವರ, ಅರವಿಂದ ಮಂಗಳೂರ, ಮಲ್ಲಯ್ಯ ಮೂಗನೂರಮಠ, ಮಲ್ಲಿಕಾರ್ಜುನ ಚೂರಿ, ಅಶೋಕ ಬಂಡರಗಲ್ಲ, ಗುರಣ್ಣ ಗೋಡಿ ಎಚ್.ಡಿ.ವೈದ್ಯ, ನಾಗೇಶ ಗಂಜಿಹಾಳ, ಹನಮಂತಗೌಡ ಬೇವೂರ, ರಮೇಶ ಧುತ್ತರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.