ಬಾಗಲಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಲ್ಲಿ ಜಮೀನು ಖರೀದಿಸಲು ದರ ನಿಗದಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ನೇತೃತ್ವದಲ್ಲಿ ಮಂಗಳವಾರ ದರ ನಿಗದಿ ಸಭೆ ಜರುಗಿತು.
ಇಲ್ಲಿನ ಜಿಲ್ಲಾಡಳಿತ ಭವನದ ನೂತನ ಸಭಾಭವನದಲ್ಲಿ ಕರೆಯ ಲಾಗಿದ್ದ ದರ ನಿಗದಿ ಸಭೆಯಲ್ಲಿ ಫಲಾ ನುಭವಿಗಳು ಹಾಗೂ ಜಮೀನು ಮಾಲಿಕರು ಹಾಜರಿದ್ದರು. ಅವರ ಸಮ್ಮುಖದಲ್ಲಿಯೇ ದರ ನಿಗದಿ ಪಡಿಸಲಾಯಿತು.
ಸರ್ಕಾರದಿಂದ ನಿಗದಿಪಡಿಸಿದ ದರದ ಮೂರು ಪಟ್ಟು ಹೆಚ್ಚು ಬೆಲೆ ನೀಡಲು ಮಾಲೀಕರು ಒಪ್ಪಿಗೆ ಸೂಚಿಸಿದರು. ಫಲಾನುಭವಿಗಳು ಜಮೀನು ಖರೀದಿಸುವ ಮಾಲೀಕರ ಉಪಸ್ಥಿತಿಯಲ್ಲಿ ಜಮೀನು ಖರೀದಿಗೆ ಒಪ್ಪಿಗೆ ನೀಡುವ ಬಗ್ಗೆ ತಿಳಿಸಿದರು.
ಜಮೀನು ಮಾಲೀಕರಿಂದ ಒಟ್ಟು 286 ಪ್ರಸ್ತಾವನೆಗಳು ಬಂದಿದ್ದು, ಅದರಲ್ಲಿ 27.17 ಎಕರೆ ಖುಷ್ಕಿ ಹಾಗೂ 1052.02 ಬಾಗಾಯ್ತು ಸೇರಿ ಒಟ್ಟು 1079.19 ಎಕರೆ ಜಮೀನು ಇದ್ದು, ಒಟ್ಟು 954 ಪರಿಶಿಷ್ಟ ಜಾತಿ ಪ್ರತಿ ಫಲಾನುಭವಿಗಳಿಗೆ ₹ 15 ಲಕ್ಷ ನಿಗದಿಪಡಿಸಿದ ಮೊತ್ತದಲ್ಲಿ ಜಮೀನು ಖರೀದಿಸಿ ಹಂಚಿಕೆ ಮಾಡಲು ಸೂಚಿಸಲಾಯಿತು.
ಅದೇ ರೀತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಜಮೀನು ಖರೀದಿಸಲು ಭೂ ಮಾಲೀಕರಿಂದ ಒಟ್ಟು 26 ಪ್ರಸ್ತಾವ ಬಂದಿದ್ದು, ಒಟ್ಟು 58.17 ಎಕರೆ ಜಮೀನಿನಲ್ಲಿ 7.03 ಎಕರೆ ಖುಷ್ಕಿ ಹಾಗೂ 51.14 ಎಕರೆ ಬಾಗಯ್ತ ಜಮೀನು ಇತ್ತು. ಒಟ್ಟು 58 ಫಲಾನುಭವಿಗಳಿಗೆ ಹಂಚಿಕೆ ಮಾಡಲು ಭೂಮಾಲೀಕರ ಹಾಗೂ ಫಲಾನುಭವಿಗಳ ಎದುರಲ್ಲೇ ಒಪ್ಪಿಗೆ ಪಡೆದು ಹಂಚಿಕೆ ಮಾಡಲು ಸೂಚಿಸಲಾಯಿತು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಎಚ್.ಜಯಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ವಿ.ಚೈತ್ರಾ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ಅಧಿಕಾರಿ ರೇಣುಕಾ ಸಾತರಲೆ ಇದ್ದರು. ಜಿಲ್ಲೆಯ ಆರು ತಾಲೂಕಿನ ಫಲಾನುಭವಿಗಳು ಹಾಗೂ ಜಮೀನು ಮಾಲೀಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.