ಇಳಕಲ್ (ಬಾಗಲಕೋಟೆ): ‘ತ್ರಿವಳಿ ತಲಾಖ್ ಮಸೂದೆಯು ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ದಮನಕಾರಿ ಕ್ರಮ’ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಟೀಕಿಸಿದರು.
ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ಗಣಿ ಹುಮ್ನಾಬಾದ್ ಪುತ್ರನ ಮದುವೆಗಾಗಿ ಶನಿವಾರ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ತಲಾಖ್ ನೀಡಿದರೂ ಮದುವೆ ರದ್ದಾಗದು. ಮದುವೆಯೇ ರದ್ದಾಗದಿದ್ದರೆ ಪತಿಯನ್ನು ಹೇಗೆ ಬಂಧಿಸಲು ಸಾಧ್ಯ? ಈ ಮಸೂದೆಯಿಂದ ಮಹಿಳೆಯರಿಗೆ ಅನ್ಯಾಯವಾಗಲಿದೆ’ ಎಂದರು.
ಮಸೂದೆಯನ್ನು ‘ಡೇಂಜರಸ್ ಗೇಮ್ ಪ್ಲಾನ್’ ಎಂದು ಟೀಕಿಸಿದ ಅವರು, ಇದೊಂದು ಕೆಟ್ಟ ಮಸೂದೆ ಎಂದು ಗೊತ್ತಿದ್ದರೂ ಜಾತ್ಯತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳು ಮಸೂದೆಯನ್ನು ಬೆಂಬಲಿಸುತ್ತಿವೆ ಎಂದು ದೂರಿದರು.
ಈ ಸಂಬಂಧ ಸಮಿತಿಯೊಂದನ್ನು ರಚಿಸಬೇಕು ಎಂದು ಆಗ್ರಹಿಸಿದ ಅವರು, ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.