ADVERTISEMENT

ದಲಿತರ ಮೇಲೆ ಹಲ್ಲೆ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:31 IST
Last Updated 17 ಏಪ್ರಿಲ್ 2017, 7:31 IST
ಬನಹಟ್ಟಿ ಸಮೀಪದ ಕುಲಹಳ್ಳಿ ಗ್ರಾಮದ ಕಟಬರಗೇರಿ ಅಂಗನವಾಡಿ ಕೇಂದ್ರದ ಮುಂದೆ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬನಹಟ್ಟಿ ಸಮೀಪದ ಕುಲಹಳ್ಳಿ ಗ್ರಾಮದ ಕಟಬರಗೇರಿ ಅಂಗನವಾಡಿ ಕೇಂದ್ರದ ಮುಂದೆ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ರಬಕವಿ- ಬನಹಟ್ಟಿ: ಅಂಬೇಡ್ಕರ್ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಮಾಡದೆ ಅಪಮಾನ ಮಾಡಿರುವುದನ್ನು ವಿರೋಧಿಸಿ ಪಶ್ನೆ ಮಾಡಿದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ, ಮತ್ತೊಬ್ಬ ಮಹಿಳೆ ಸೇರಿ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತೇರದಾಳ ವಲಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಬಸವರಾಜ ದೊಡಮನಿ ಆರೋಪಿಸಿದ್ದಾರೆ.

ಸಮೀಪದ ಕುಲಹಳ್ಳಿ ಗ್ರಾಮದ ಕಟಬರಗೇರಿಯ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ಅಂಬೇಡ್ಕರ್ ದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಮಾಡಿಲ್ಲ ಏಕೆ ಎಂದು  ಪ್ರಶ್ನಿಸಿದ ಸಂದರ್ಭ ನಮ್ಮನ್ನು ಅವಮಾನಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ದೊಡಮನಿ ಆರೋಪಿಸಿದರು.

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ದಲಿತ ಸಮುದಾಯದ ಹಲವಾರು ಯುವಕರು ಅಂಗನವಾಡಿ ಕೇಂದ್ರದ ಮುಂದೆ ಧರಣಿ ನಡೆಸಿ ಘಟನೆಯನ್ನು ಖಂಡಿಸಿದರು. ಘಟನೆ ನಡೆದ ಕೆಲವೇ  ನಿಮಿಷಗಳಲ್ಲಿ ಬನಹಟ್ಟಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಪ್ರಕಾಶ ರಾಠೋಡ ಸೇರಿದಂತೆ ಪೊಲೀಸ್ ತಂಡ ಸ್ಥಳಕ್ಕೆ ಬಂದು ಪರಿಸ್ಥಿತಿ   ತಿಳಿಗೊಳಿಸಿದರು.

ADVERTISEMENT

ಯಲ್ಲಟ್ಟಿ- ಹಿಪ್ಪರಗಿ ರಸ್ತೆಯ ಮಧ್ಯೆ ಕೆಲವರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಯುವಕರ ಮನವೊಲಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರುದಸಂಸ ಮುಖಂಡರಾದ ರವಿ ಸುತಾರ, ಪರಮಾನಂದ ಕಾಂಬಳೆ, ಶಿವನಿಂಗ ಪಡಸಾಲಿ, ಶಂಕರ ಹೊಸಮನಿ, ಸದಾಶಿವ ದೊಡಮನಿ, ಧರ್ಮಣ್ಣ ಯಲ್ಲಟ್ಟಿ, ಹಣಮಂತ ಕಾಂಬಳೆ, ಮೂಕಪ್ಪ ಆಸಂಗಿ, ತುಕಾರಾಮ ಬನ್ನೂರ, ರಮೇಶ ಕಾಂಬಳೆ, ವಿಜಯ ಹೊಸಮನಿ ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.