ADVERTISEMENT

ದಾಖಲೆ ಇಲ್ಲದ ₹98.81 ಲಕ್ಷ ನಗದು ವಶ

ಬಾಗಲಕೋಟೆ: ಅತಿ ಹೆಚ್ಚು ನಗದು ಪತ್ತೆ; ಬೆಂಗಳೂರು ನಂತರ ಜಿಲ್ಲೆಗೆ ಎರಡನೇ ಸ್ಥಾನ; 13 ಪ್ರಕರಣ ದಾಖಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 5:21 IST
Last Updated 12 ಏಪ್ರಿಲ್ 2018, 5:21 IST

ಬಾಗಲಕೋಟೆ: ‘ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯಲ್ಲಿ ₹98,81,780 ದಾಖಲೆ ಇಲ್ಲದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿಯೇ ಅತಿ ಹೆಚ್ಚು ನಗದು ಜಿಲ್ಲೆಯಲ್ಲಿ ದೊರೆತಿದೆ. ಅಕ್ರಮ ಹಣ ಸಾಗಣೆಗೆ ಸಂಬಂಧಿಸಿದಂತೆ 13 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದರು.

ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಇಲ್ಲಿಯವರೆಗೂ 297.88 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಜಮಖಂಡಿಯಲ್ಲಿ 480 ಚೀಲ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಇಳಕಲ್‌ನಲ್ಲಿ ಮತದಾರರಿಗೆ ಹಂಚಲು ಇಟ್ಟಿದ್ದ 318 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ADVERTISEMENT

ಎಫ್‌ಎಸ್‌ಎಲ್ ವರದಿ ಕೇಳಿದ್ದೇವೆ: ‘ಮಹಿಳೆಯೊಂದಿಗೆ ಆಪ್ತವಾಗಿ ಮಾತನಾಡಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೊ ನಕಲಿ. ಅದರಲ್ಲಿನ ಧ್ವನಿ ನನ್ನದಲ್ಲ’ ಎಂದು ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ದೂರು ದಾಖಲಿಸಿದ್ದಾರೆ. ಅವರ ಧ್ವನಿ ಮಾದರಿ ಪಡೆದು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಶಾಸಕರ ದೂರಿನಂತೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಎಸ್‌ಪಿ ತಿಳಿಸಿದರು.

ನಾಲ್ಕು ಕಂಪೆನಿ ಆಗಮನ: ಚುನಾವಣೆ ಹಿನ್ನೆಲೆ ಭದ್ರತೆಗಾಗಿ ಕೇಂದ್ರದಿಂದ ಅರೆಸೇನಾ ಪಡೆಯ ತಲಾ 100 ಯೋಧರ ನಾಲ್ಕು ಕಂಪೆನಿಗಳು ಬಂದಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ಇರಿಸಲಾಗಿದೆ. ಮೂಧೋಳ ಹಾಗೂ ಬಾಗಲಕೋಟೆಯಲ್ಲಿ ಈಗಾಗಲೇ ಪಥ ಸಂಚಲನ ನಡೆಸಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.