ADVERTISEMENT

ನೀರಾವರಿ ಕಾಮಗಾರಿಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಮೇ 2017, 7:26 IST
Last Updated 11 ಮೇ 2017, 7:26 IST
ಹೆರಕಲ್‌ ಏತ ನೀರಾವರಿ ಯೋಜನೆಗೆ ನೀರು ಪೂರೈಸುವ ಜಾಕ್‌ವೆಲ್‌ (ಎಡ ಚಿತ್ರ).
ಹೆರಕಲ್‌ ಏತ ನೀರಾವರಿ ಯೋಜನೆಗೆ ನೀರು ಪೂರೈಸುವ ಜಾಕ್‌ವೆಲ್‌ (ಎಡ ಚಿತ್ರ).   

ಕೆರೂರ: ದಶಕಗಳ ನೀರಾವರಿ ಹೋರಾಟವು ಇಂದು (ಇದೇ 11ರಂದು) ಮುಖ್ಯ ಕಾಲುವೆಗಳ ನಿರ್ಮಾಣ ಕಾಮಗಾರಿ ಆರಂಭವಾಗುವ ಮೂಲಕ ತಾರ್ಕಿಕ ಅಂತ್ಯ ಕಾಣಲಿದೆ.
ಈ ಭಾಗದಲ್ಲಿ ನೀರಾವರಿ ಸೌಲಭ್ಯ ಮರೀಚಿಕೆಯಾಗಿ ಕೃಷಿ ಚಟುವಟಿಕೆ ನಡೆಸುವುದು ಸವಲಾಗಿತ್ತು. ಈಗ ಹೆರ­ಕಲ್ ಏತ ನೀರಾವರಿ ಯೋಜನೆ ಕಾಮಗಾರಿ ಮೂಲಕ ಒಣ ಜಮೀನುಗಳಲ್ಲಿ ಹಸಿರಿನ ಕನಸು ಕಾಣುವಂತೆ ಮಾಡಿದೆ.

ಯೋಜನೆಯಿಂದ ಬಾದಾಮಿ ತಾಲ್ಲೂಕಿ­ನ ಬೀಳಗಿ ಕ್ಷೇತ್ರದ ಬರಡು ಭೂಮಿಯ ಬಡ ರೈತರ ಪಾಲಿಗೆ ಘಟಪ್ರಭೆ ಹರಿದು ಬರಲಿದೆ. ಹೆರಕಲ್‌ ಏತ ನೀರಾವರಿ ಯೋಜನೆ ರೂಪಿಸಿದ್ದ ಬೀಳಗಿ ಶಾಸಕ ಜೆ.ಟಿ. ಪಾಟೀಲ ಪಕ್ಷದ ಮುಖಂಡ­­ರೊಂದಿಗೆ ಇನಾಂ ಯರಗೊ­ಪ್ಪದ ಸಮೀಪದ ಮುಖ್ಯ ನೀರು ವಿತರಣಾ ತೊಟ್ಟಿ ಹಾಗೂ ಅಗಸನಕೊಪ್ಪದ ಬಳಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಲಿದ್ದಾರೆ.

1.326 ಟಿಎಂಸಿ ನೀರು:
ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಹೆರಕಲ್ ಏತ ನೀರಾವರಿಗೆ 1.326 ಟಿಎಂಸಿ ಅಡಿ ನೀರಿನ ಬಳಕೆಗೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಬಳಿ ಘಟಪ್ರಭಾ ನದಿಯ ಬಲ ಭಾಗದ ನೀರನ್ನು ಆರ್.ಎಲ್ 513 ಮೀಟರ್‌ ನಿಂದ ಆರ್.ಎಲ್. 630 ಮೀ ವರೆಗೆ ಮೇಲೆತ್ತಿ ಈ ಕಾಲುವೆಗಳಿಗೆ ಹರಿಸಲಾ­ಗುವುದು.

ADVERTISEMENT

34 ಗ್ರಾಮಕ್ಕೆ ನೀರಾವರಿ ಸೌಲಭ್ಯ:
ತಾಲ್ಲೂಕಿನಲ್ಲಿ ಮಲಪ್ರಭೆ, ಘಟಪ್ರಭೆ ಬಲ ದಂಡೆ ಕಾಲುವೆ ಇದ್ದರೂ ನೀರಿನ ಕೊರತೆ ಇತ್ತು.  ಒಟ್ಟು 34 ಹಳ್ಳಿಗಳು 14,826 ಎಕರೆ ವ್ಯಾಪ್ತಿಯ ರೈತರಿಗೆ ನೀರಾವರಿ ಸೌಲಭ್ಯ ಒಲಿದು ಬರಲಿದೆ.

ಪೂರ್ವ ಮುಖ್ಯ ಕಾಲುವೆ:
7.05 ಕಿ.ಮೀ ಉದ್ದದ ಕಾಲುವೆ ಮಾರ್ಗವು ಹುಲಸಗೇರಿ, ಬಂದಕೇರಿ, ಗುಬ್ಬೇರಕೊಪ್ಪ, ಹಂಗರಗಿ, ಹೂಲಗೇರಿ, ಜಮ್ಮನಕಟ್ಟಿ, ಕಟಗೇರಿ, ಕೊಂಕನಕೊಪ್ಪ, ಲಕ್ಕಸಕೊಪ್ಪ, ಮಣಿನಾಗರ, ಇನಾಂ ಯರಗೊಪ್ಪ ಸೇರಿ ಒಟ್ಟು 11 ಗ್ರಾಮಗಳ 3651.77 ಎಕರೆ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಡಲಿವೆ.

ಪಶ್ಚಿಮ ಮುಖ್ಯ ಕಾಲುವೆ:
17.85 ಕಿ.ಮೀ ಕಾಲುವೆ ಮಾರ್ಗ­ದಲ್ಲಿ ಅಗಸನಕೊಪ್ಪ, ಚಿಂಚಲಕಟ್ಟಿ, ಫಕೀರಬೂದಿಹಾಳ, ಗುಬ್ಬೇರಕೊಪ್ಪ, ಹಲಕುರ್ಕಿ, ಹಿರೇಬೂದಿಹಾಳ, ಜಲ­ಗೇರಿ, ಜಮ್ಮನಕಟ್ಟಿ, ಕಡಪಟ್ಟಿ, ಖಾಜಿ ಬೂದಿಹಾಳ, ಕಲಬಂದಕೇರಿ, ಕೆರೂರ, ಕೊಂಕಣಕೊಪ್ಪ, ಲಕ್ಕಸಕೊಪ್ಪ, ಮಾಲಗಿ, ಮಣಿನಾಗರ, ಮತ್ತಿಕಟ್ಟಿ, ನರೇನೂರ, ಸಾಗನೂರ, ಒಡೆಯನ ಹೊಸಕೋಟೆ, ಯಂಕಂಚಿ, ಇನಾಂ ಯರಗೊಪ್ಪ ಸೇರಿದಂತೆ 23 ಹಳ್ಳಿಗಳ ಒಟ್ಟು 11,174 ಎಕರೆ ಪ್ರದೇಶಕ್ಕೆ ನೀರು ಒದಗಲಿದೆ ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.

ಯೋಜನೆಗೆ ₹ 38 ಕೋಟಿ ವೆಚ್ಚ:
₹38 ಕೋಟಿಯನ್ನು ಯೋಜನೆಗೆ ವೆಚ್ಚಮಾಡಲಾಗಿದೆ. ಬೆಂಗಳೂರಿನ ಅಮೃ­­ತಾ ಕನ್‌ಸ್ಟ್ರಕ್ಷನ್‌ ಕಂಪೆನಿ ಗುತ್ತಿಗೆ ಪಡೆದಿದ್ದು ಕಾಮಗಾರಿ ಮುಕ್ತಾಯಕ್ಕೆ 2018ರ ಮಾರ್ಚ್‌ ತಿಂಗಳು ನಿಗದಿಯಾಗಿದೆ. ಇದೇ 11ರಂದು ಭೂಮಿಪೂಜೆ ನಡೆಯಲಿರುವ ಕಾಲುವೆ ನಿರ್ಮಾಣ ಕಾಮಗಾರಿಗಳು ಜೂನ್‌ನಲ್ಲಿ ಆರಂಭಗೊಳ್ಳಲಿವೆ. ‘ರೈತರ ಬದುಕು ಹಸನಾಗಿ, ಅಭಿ­ವೃದ್ಧಿಯ ಹೊಂಗಿರಣ ಹೊಳೆಯಲಿದೆ’ ಎಂದು ಶಾಸಕ ಜಿ.ಟಿ. ಪಾಟೀಲ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.