ADVERTISEMENT

ಪಿ.ಬಿ.ಎಸ್‌ ಸ್ವರಸ್ಮರಣೆ ಸಮಾರಂಭ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:21 IST
Last Updated 24 ಏಪ್ರಿಲ್ 2017, 6:21 IST

ಇಳಕಲ್: ‘ಮಾಧುರ್ಯ ಸಾರ್ವಭೌಮ ಡಾ.ಪಿ.ಬಿ.ಶ್ರೀನಿವಾಸ ಅವರು ತಮ್ಮ ಮಧುರ ಗೀತೆಗಳ ಮೂಲಕ ಸದಾ ನಮ್ಮೊಂದಿಗೆ ಇದ್ದಾರೆ. ಅವರು ಸಾವಿಲ್ಲದ ಸಾಧಕರು’ ಎಂದು ಹಿರಿಯ ಚಲನಚಿತ್ರ ನಟ ಶ್ರೀನಿವಾಸಮೂರ್ತಿ ಹೇಳಿದರು.ನಗರದ  ಅನುಭವ ಮಂಟಪದಲ್ಲಿ ರವೀಂದ್ರ ದೇವಗಿರಿಕರ ಸ್ನೇಹರಂಗದ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ.ಪಿ.ಬಿ. ಶ್ರೀನಿವಾಸ್‌ ಅವರ ಚತುರ್ಥ ಪುಣ್ಯಸ್ಮರಣೆ, ಸ್ವರಸ್ಮರಣೆ ಹಾಗೂ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಖ್ಯಾತ ಗಾಯಕಿ ಬಿ.ಕೆ. ಸುಮಿತ್ರಾ ಮಾತನಾಡಿ, ‘ಪಿ.ಬಿ. ಶ್ರೀನಿವಾಸ್‌ ಅವರೊಂದಿಗೆ ನೂರಾರು ಹಾಡುಗಳನ್ನು ಹಾಡಿದ ಅದೃಷ್ಟ ನನ್ನದು. ಅವರು ತಮ್ಮನ್ನು ಅರ್ಪಿಸಿಕೊಂಡು ಹಾಡುತ್ತಿದ್ದರು. ಆರಂಭದಲ್ಲಿ ಡಾ.ರಾಜಕುಮಾರ ಅವರ ಯಶಸ್ಸಿನಲ್ಲಿ  ಡಾ.ಪಿ.ಬಿ.ಶ್ರೀನಿವಾಸ್‌ ಅವರ ಹಾಡುಗಳ ಪಾಲಿದೆ ಎಂದರೇ ಅದು ಅತಿಶಯೋಕ್ತಿ ಆಗಲಾರದು’ ಎಂದು ಅಭಿಪ್ರಾಯಪಟ್ಟರು.

ಪಿ.ಬಿ.ಶ್ರೀನಿವಾಸ ಅವರ ಅಭಿಮಾನಿ ರವೀಂದ್ರ ದೇವಗಿರಿಕರ ಮಾತನಾಡಿ, ‘ಪಿ.ಬಿ.ಶ್ರೀನಿವಾಸ ಅವರು ಹಾಡಿನ ಆಶಯ ಹಾಗೂ ಭಾವನೆಗಳನ್ನು ಧ್ವನಿಯಲ್ಲಿ ತಂದು ಕೇಳುಗರ ಮನಸ್ಸನ್ನು ಅರಳಿಸುತ್ತಿದ್ದರು. ಆದರೆ, ಇವತ್ತಿನ ಚಲನಚಿತ್ರ ಗೀತೆಗಳ ಬಗ್ಗೆ ಈ ಮಾತನ್ನು ಹೇಳಲಾಗದು. ಶ್ರೀನಿವಾಸ ಅವರ ಸ್ವರಸ್ಮರಣೆಯ ಮೂಲಕ ಮಕ್ಕಳಿಗೆ ಸದಾಭಿರುಚಿಯ ಸಂಗೀತದಲ್ಲಿ ಆಸಕ್ತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದರು.

ADVERTISEMENT

ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಆರ್‌. ಶ್ರೀನಾಥ ಮಾತನಾಡಿದರು. ಶಿರೂರಿನ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಭಜನೆ ಹಾಗೂ ಜಾನಪದ ಹಾಡುಗಳ ಹಿರಿಯ ಗಾಯಕ ನಾರಾಯಣಪ್ಪ ಧೋತ್ರೆ ಅವರಿಗೆ ₹ 25 ಸಾವಿರ ನಗದು ಪುರಸ್ಕಾರ ನೀಡಿ, ಗೌರವಿಸಲಾಯಿತು. ಸ್ನೇಹರಂಗದ ಅಧ್ಯಕ್ಷ ಪ್ರೊ.ಕೆ.ಎ. ಬನ್ನಟ್ಟಿ ಅವರು ‘ಸ್ವರ ಸ್ಮರಣೆ–2017’ ಕಿರು ಹೊತ್ತಿಗೆ ಬಿಡುಗಡೆ ಮಾತನಾಡಿದರು.

ಸಮಾರಂಭದ ನಂತರ ಬಿ.ಕೆ. ಸುಮಿತ್ರಾ, ಶ್ರೀನಿವಾಸಮೂರ್ತಿ, ವಿಜಯಮಹಾಂತೇಶ ಗದ್ದನಕೇರಿ, ಪರಶುರಾಮ ಪವಾರ, ಗೋಪಿ ಕಠಾರೆ, ಶ್ರೇಯಾ ನಂದರಗಿ, ಕೋಮಲ ರಾಯಬಾಗಿ, ವಿದ್ಯಾಶ್ರೀ ಗಂಜಿ, ಗೋವಿಂದ ಕರವಾ, ಆರ್‌.ಶ್ರೀನಾಥ ಪಿ.ಬಿ.ಎಸ್‌ ಅವರ 25 ಹಾಡುಗಳನ್ನು 3 ಗಂಟೆಗಳ ಕಾಲ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮನಸೂರೆಗೊಂಡರು. ಔದ್ಯೋಗಿಕ ಸಲಹೆಗಾರ, ಪುಣೆಯ ನಿವಾಸಿ ರವೀಂದ್ರ ದೇವಗಿರಿಕರ ಸ್ವಾಗತಿಸಿದರು. ಪ್ರೊ.ಶಿವಪುತ್ರ ಸಮಾಳದ ವಂದಿಸಿದರು. ಪಿ.ಢಗಳಚಂದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.