ADVERTISEMENT

ಪೊಲೀಸರಿಂದ ತಪಾಸಣೆ: ರೈತ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 5:10 IST
Last Updated 10 ನವೆಂಬರ್ 2017, 5:10 IST

ಬಾಗಲಕೋಟೆ: ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲು ರೈತ ಸಂಘದ ಮುಖಂಡರು ಹಿಪ್ಪರಗಿಯ ಹೆಲಿಪ್ಯಾಡ್‌ಗೆ ಬಂದಾಗ ಪೊಲೀಸರು ಅವರನ್ನು ತಪಾಸಣೆಗೆ ಒಳಪಡಿಸಿದರು. ಇದು ಪರಸ್ಪರ ವಾದ–ವಿವಾದಕ್ಕೆ ದಾರಿಯಾಯಿತು.

ತಮ್ಮನ್ನು ತಪಾಸಣೆಗೊಳಪಡಿಸಿದ್ದನ್ನು ವಿರೋಧಿಸಿದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ‘ಹೆಲಿಪ್ಯಾಡ್‌ಗೆ ಶಾಸಕರು, ಸಚಿವರೊಂದಿಗೆ ಅವರ ಬೆಂಬಲಿಗರು ಬಂದಿದ್ದಾರೆ. ಅವರನ್ನು ತಪಾಸಣೆಗೆ ಒಳಪಡಿಸುತ್ತಿಲ್ಲ. ಆದರೆ ನಮ್ಮನ್ನು (ರೈತ ಮುಖಂಡರು) ಮಾತ್ರ ತಪಾಸಣೆ ಮಾಡುತ್ತಿದ್ದೀರಿ. ಆ ಮೂಲಕ ಜನತೆಯನ್ನು ಅಪಮಾನಕ್ಕೀಡು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪೊಲೀಸ್ ತಪಾಸಣೆಯ ನೇತೃತ್ವ ವಹಿಸಿದ್ದ ಸಿಪಿಐ ಸಂಜೀವ ಕಾಂಬ್ಳೆ ವಿರುದ್ಧ ರೈತ ಮುಖಂಡರು ಈ ವೇಳೆ ಹರಿಹಾಯ್ದರು. ನಿಮ್ಮ ಕಾರಣದಿಂದಲೇ ಈ ಕಾರ್ಯ ನಡೆಯುತ್ತಿದೆ. ನಮ್ಮನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿ ಸ್ಥಳಕ್ಕೆ ಎಸ್‌ಪಿ ಹಾಗೂ ಐಜಿಪಿ ಅವರನ್ನು ಕರೆಸುವಂತೆ ಪಟ್ಟುಹಿಡಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಭದ್ರತೆ ಒದಗಿಸಲಾಗುತ್ತಿದೆ. ಹಾಗಾಗಿ ನಿಯಮಾವಳಿಯಂತೆ ಎಲ್ಲರನ್ನೂ ತಪಾಸಣೆಗೆ ಒಳಪಡಿಸಬೇಕಿದೆ. ನಿಮ್ಮನ್ನು ಮಾತ್ರ ಟಾರ್ಗೆಟ್ ಮಾಡುತ್ತಿಲ್ಲ’ ಎಂದು ಇನ್‌ಸ್ಪೆಕ್ಟರ್ ಕಾಂಬ್ಳೆ ಮನವರಿಕೆ ಮಾಡಿಕೊಡಲು ಮುಂದಾದರು. ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದಕ್ಕೆ ದಾರಿಯಾಯಿತು. ಆಗ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ರೈತ ಮುಖಂಡರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.