ADVERTISEMENT

ಬನಹಟ್ಟಿ: ಇಬ್ಬರು ಮಹಿಳೆಯರ ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 5:14 IST
Last Updated 17 ನವೆಂಬರ್ 2017, 5:14 IST

ರಬಕವಿ ಬನಹಟ್ಟಿ/ಬೀಳಗಿ; ಖಾಸಗಿ ವೈದ್ಯರ ಪ್ರತಿಭಟನೆ ಪರಿಣಾಮ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಬನಹಟ್ಟಿ ನಗರದ ದತ್ತಾತ್ರೆಯ ದೇವಸ್ಥಾನ ಬಳಿಯ ನಿವಾಸಿ ಶಾಂತವ್ವ ರಾವಳ (58) ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಬೆಳಗಿನ ಜಾವ ಎದೆ ನೋವಿನ ಕಾರಣ ಶಾಂತವ್ವ ಅವರನ್ನು ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಮಖಂಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿಗೆ ತೆರಳುವಷ್ಟರಲ್ಲಿ ಶಾಂತವ್ವ ಸಾವನ್ನಪ್ಪಿದ್ದಾರೆ. ಬನಹಟ್ಟಿಯಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತಿದ್ದರೆ ಶಾಂತವ್ವ ಉಳಿಯುತ್ತಿದ್ದರು ಎಂದು ಸಂಬಂಧಿಗಳು ತಿಳಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಬನಹಟ್ಟಿಯ ಪ್ರೇಮಾ ಮಹಾದೇವ ಕೋಷ್ಠಿ (45) ಎಂಬ ಮಹಿಳೆಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ ಜ್ವರದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿ ಸುಂದರವ್ವ ಬಡಿಗೇರ ಗುರುವಾರ ಸಾವಿಗೀಡಾಗಿದ್ದಾಳೆ.

ADVERTISEMENT

ಗ್ರಾಮದ ಭೀಮಶಿ ಹಾಗೂ ಕಾಳವ್ವ ದಂಪತಿ ಪುತ್ರಿ ಸುಂದರವ್ವಗೆ ಬುಧವಾರ ಸಂಜೆಯಿಂದ ಜ್ವರ ಕಾಣಿಸಿಕೊಂಡಿದೆ. ‘ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿ ಖಾಸಗಿ ವೈದ್ಯರು ಕ್ಲಿನಿಕ್ ಮುಚ್ಚಿದ್ದರಿಂದ ಬೆಳಿಗ್ಗೆ ಬೀಳಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯದಲ್ಲಿಯೇ ಸುಂದರವ್ವ ಸಾವಿಗೀಡಾದಳು’ ಎಂದು ಆಕೆಯ ಚಿಕ್ಕಪ್ಪ ಉಮೇಶ ಬಡಿಗೇರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.