ADVERTISEMENT

ಮಳೆ-,ಬೆಳೆಗಾಗಿ ಸೈಕಲ್‌ ಯಾತ್ರೆ

ಶ್ರೀಧರ ಗೌಡರ
Published 8 ಸೆಪ್ಟೆಂಬರ್ 2017, 6:10 IST
Last Updated 8 ಸೆಪ್ಟೆಂಬರ್ 2017, 6:10 IST
ಸೈಕಲ್ ಯಾತ್ರಿ ನರಸಿಂಹರಾವ್ ಅವರನ್ನು ಬಸವ ಧರ್ಮಪೀಠದ ಬಸವ ಕೃಪಾ ಅನಾಥಾಲಯದ ಸಿಬ್ಬಂದಿ ಸತ್ಕರಿಸಿದರು
ಸೈಕಲ್ ಯಾತ್ರಿ ನರಸಿಂಹರಾವ್ ಅವರನ್ನು ಬಸವ ಧರ್ಮಪೀಠದ ಬಸವ ಕೃಪಾ ಅನಾಥಾಲಯದ ಸಿಬ್ಬಂದಿ ಸತ್ಕರಿಸಿದರು   

ಕೂಡಲಸಂಗಮ: ಮಳೆ–ಬೆಳೆಗಾಗಿ ಪ್ರಾರ್ಥಿಸಿ ಧಾರ್ಮಿಕ ಕ್ಷೇತ್ರಗಳಿಗೆ ಸೈಕಲ್‌ ಯಾತ್ರೆ ಕೈಗೊಳ್ಳುವ ಮೂಲಕ ವ್ಯಕ್ತಿಯೊಬ್ಬರು ಗಮನ ಸೆಳೆದಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಅಮರೇಶ್ವರದ ವಿಜಯಕೃಷ್ಣ ನರಸಿಂಹರಾವ್ ಚಾಟ್ರಾಜುಲ್ (47) ಯಾತ್ರೆ ಕೈಗೊಂಡ ಭಕ್ತ.

ಕೂಲಿ ಕೆಲಸ ಮಾಡುವ ವಿಜಯಕೃಷ್ಣ, ಸತತ 12 ವರ್ಷಗಳಿಂದ  ಸೈಕಲ್ ಯಾತ್ರೆ ಕೈಗೊಳ್ಳುತ್ತಿದ್ದಾರೆ. ದೇಶದಾದ್ಯಂತ ಇರುವಂಥ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟು ದೇವರಲ್ಲಿ ಪ್ರಾರ್ಥಿಸುತ್ತಾರೆ.

ವರ್ಷದಲ್ಲಿ 45 ದಿನ ಈ ಕಾರ್ಯಕ್ಕೆ ಮೀಸಲಿಡುತ್ತಾರೆ.  ‘ಎಲ್ಲ ಕಡೆ ಮಳೀ ಇಲ್ಲದಕ್ಕ ಬರಗಾಲ ಬಂದೇತ್ರಿ, ರೈತಾಪಿ, ಕೂಲಿಕಾರರು ಹಾಗೂ ದುಡಿದು ತಿನ್ನೋವಂಥ ಬಡವರು ಸಂಕಷ್ಟಕ್ಕೆ ಈಡಾಗ್ಯಾರ.. ಅವರಿಗೆಲ್ಲ ಒಳ್ಳೆದಾಗ್ಲಿ ಅಂತ ಸೈಕಲ್ ಯಾತ್ರಾ ಮಾಡಾಕತ್ತೇನಿ’ ಎಂದು ವಿಜಯಕೃಷ್ಣ ಹೇಳಿದರು.

ADVERTISEMENT

‘ಊರ್‌ ಬಿಡೋವಾಗ ₹2 ಸಾವಿರ, ಎರಡು ಜೊತಿ ಬಟ್ಟಿ ಹಾಗೂ ಹಾಸಿಗೆ-ಹೊದಿಕೆ ತಗೊಂಡು ಹೊರಡ್ತೀನಿ.. ದಿನಾ 80 ಕಿ.ಮೀ.ದಂಗ ಒಟ್ಟು 5 ಸಾವಿರ ಕಿ.ಮೀ. ಸೈಕಲ್ ಮೇಲೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ, ನಂತರ ಊರಿಗೆ ವಾಪಸಾಗ್ತೀನಿ’  ಎನ್ನುತ್ತಾರೆ ಅವರು. ಬುಧವಾರ ರಾತ್ರಿ ಕೂಡಲ ಸಂಗಮಕ್ಕೆ ಭೇಟಿ ನೀಡಿದ ವಿಜಯಕೃಷ್ಣ ಅವರಿಗೆ ಬಸವ ಧರ್ಮ ಪೀಠದ ಅನಾ ಥಾಲಯದ ಸಿಬ್ಬಂದಿ ಸತ್ಕರಿಸಿ ಬೀಳ್ಕೊಟ್ಟರು.

ತೆಲಂಗಾಣದಿಂದ ಆರಂಭ: ಈ ವರ್ಷ ವೂ ತೆಲಂಗಾಣದ ಶ್ರೀಕೃಷ್ಣ ಗೋಶಾಲಾದ ಸಾಧನಾ ನಗರದಿಂದ ಯಾತ್ರೆ ಆರಂಭಿಸಿದ ಅವರು, ಹೈದರಾಬಾದ್‌, ತುಳಜಾಪುರ, ಶಿರಡಿ, ಕೊಲ್ಹಾಪುರ, ಪಂಢರಪುರ, ಸವದತ್ತಿಗೆ ಭೇಟಿ ನೀಡಿ, ಕೂಡಲಸಂಗಮಕ್ಕೆ ಬಂದಿದ್ದರು.   ಇಲ್ಲಿಂದ ವಿಜಯಪುರಕ್ಕೆ ತೆರಳಿದರು.
 

* * 

ಮಳೆ ಬೆಳೆಗೆ ಪ್ರಾರ್ಥಿಸಿ 12 ವರ್ಷಗಳಿಂದ  ಪ್ರವಾಸ ಮಾಡುತ್ತೇನೆ. ಈ ವರ್ಷ ಆ.1ರಿಂದ ಸೈಕಲ್ ಯಾತ್ರೆ ಆರಂಭಿ ಸಿದ್ದು ಸದ್ಯ 3,500 ಕಿ.ಮೀ ಕ್ರಮಿಸಿದ್ದೇನೆ
ವಿಜಯಕೃಷ್ಣ
ಸೈಕಲ್‌ ಯಾತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.