ಇಳಕಲ್: ‘ರಂಗಭೂಮಿ ಜನ ಸಾಮಾನ್ಯರಿಗೆ ಮನರಂಜನೆ ಜೊತೆಗೆ ಮೌಲ್ಯಗಳನ್ನು ತಲುಪಿಸುವ ಮಾಧ್ಯಮವಾಗಿದೆ. ಈಚೆಗೆ ಸಿನೆಮಾ, ಟಿವಿ ಹಾವಳಿಯಿಂದಾಗಿ ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಕಲಾವಿದರನ್ನು ಉತ್ತೇಜಿಸಲು ಪ್ರೇಕ್ಷಕರು ನಾಟಕ ನೋಡಬೇಕು’ ಎಂದು ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ ಹೇಳಿದರು.
ಏಣಗಿ ಬಾಳಪ್ಪ ಸ್ಮರಣಾರ್ಥ ನಗರದ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ಸ್ನೇಹರಂಗ ಹಾಗೂ ನೀನಾಸಂ ತಿರುಗಾಟ ನಾಟಕಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಇಳಕಲ್ ನಗರಕ್ಕೆ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ ವಿಶಿಷ್ಟ ಛಾಪು ಮೂಡಿಸಿದೆ. ಪ್ರತಿ ವರ್ಷ ಹಲವು ನಾಟಕಗಳನ್ನು ಅಭಿನಯಿಸುವ ಜತೆಗೆ ಉತ್ತಮ ತಂಡಗಳನ್ನು ಕರೆಸಿ ಜನರಿಗೆ ನಾಟಕಗಳನ್ನು ತೋರಿಸಿ ಸ್ನೇಹರಂಗದಂತಹ ಸಂಸ್ಥೆಗಳು ಕಲಾಸಕ್ತಿ ಬೆಳೆಸುತ್ತಿವೆ. ನಗರದಲ್ಲಿ ರಂಗಭೂಮಿ ಕಾರ್ಯ ಚಟುವಟಿಕೆಗಳಿಗೆ ಸದಾ ನೆರವು ನೀಡಲು ತಾವು ಸಿದ್ಧ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ನೇಹರಂಗದ ಅಧ್ಯಕ್ಷ ಕೆ.ಎ. ಬನ್ನಟ್ಟಿ ಮಾತನಾಡಿ, ‘35 ವರ್ಷಗಳಿಂದ ನಿರಂತರವಾಗಿ ಸಂಸ್ಥೆ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ತಂಡದ ನಾಟಕಗಳು ರಾಜ್ಯ ಮಾತ್ರವಲ್ಲ ರಾಷ್ಟ್ರಾದ್ಯಂತ ಪ್ರದರ್ಶನ ಕಂಡಿವೆ. ರಂಗ ಚಟುವಟಿಕೆಗಳಲ್ಲಿ ಬದ್ಧತೆ ಹೊಂದಿರುವ ಕಲಾವಿದರನ್ನು ಹುಟ್ಟು ಹಾಕಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ನಾಟಕೋತ್ಸವಕ್ಕೆ ನೆರವು ನೀಡಿದ ಗ್ರಾನೈಟ್ ಉದ್ಯಮಿ ವೈ.ಎಸ್. ಹೂಲಗೇರಿ ಅವರನ್ನು ಸನ್ಮಾನಿಸಲಾಯಿತು. ಸ್ನೇಹರಂಗದ ಕಾರ್ಯದರ್ಶಿ ಮಹಾದೇವ ಕಂಬಾಗಿ ಸ್ವಾಗತಿಸಿದರು. ಪಿ.ಬಿ. ಧುತ್ತರಗಿ ಪ್ರತಿಷ್ಠಾದ ಸದಸ್ಯ ಮಹಾಂತೇಶ ಗಜೇಂದ್ರಗಡ ವಂದಿಸಿದರು. ರಂಗಕರ್ಮಿ ಢಗಳಚಂದ ಪವಾರ ನಿರೂಪಿಸಿದರು.
ಕಾರ್ಯಕ್ರಮದ ನಂತರ ನೀನಾಸಂ ತಂಡದಿಂದ ಭಾಸ (ಕನ್ನಡಕ್ಕೆ: ಎಲ್. ಗುಂಡಪ್ಪ) ರಚಿಸಿದ, ಸಾಲಿಯಾನ ಉಮೇಶ ನಾರಾಯಣ ನಿರ್ದೇಶಿಸಿದ ‘ಮಧ್ಯಮ ವ್ಯಾಯೋಗ‘ ನಾಟಕ ಪ್ರದರ್ಶಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.