ಮಹಾಲಿಂಗಪುರ: ಸಾಧನೆಗೆ ಬಡತನ ಅಡ್ಡಿಯಾಗಲಾರದು ಎಂಬ ಸಂದೇಶಗಳನ್ನು ಇಂತಹ ಉದಾಹರಣೆಗಳು ಸಾಬೀತು ಪಡಿಸಿವೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಯುವ ಜನಾಂಗವನ್ನು ಹೊಂದಿರುವ ನಮ್ಮ ಯುವಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಎಸ್ಸಿಪಿ ಕಾಲೇಜಿನ ಉಪ ಪ್ರಾಚಾರ್ಯ ಆರ್.ಎ. ಸೂರ್ಯವಂಶಿ ಹೇಳಿದರು.
ಕೆಎಲ್ಇ ಸಂಸ್ಥೆಯ ಪಾಲಿಟೆಕ್ನಿಕ್ನಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಮೊಬೈಲ್ನಂತಹ ಆಧುನಿಕ ಸಾಧನ ಪರಿಣಾಮ ಜಡತ್ವ ಮನೆಮಾಡಿಕೊಂಡಿದೆ, ಯುವಕರು ಮೈ ಮುರಿದು ದುಡಿಯುವ ಪ್ರವೃತ್ತಿ ಬೆಳೆಸಿಕೊಂಡು ದೇಶದ ಪ್ರಗತಿಗೆ ಕಾರಣರಾಗಬೇಕು ಎಂದು ಯುವಕರಿಗೆ ಹೇಳಿದರು.
ಪ್ರಾಚಾರ್ಯ ಎಸ್.ಐ. ಕುಂದಗೋಳ ಮಾತನಾಡಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ನಿರುದ್ಯೋಗಿ ಯುವಕರು, ಶಾಲಾ ಕಾಲೇಜು ಅರ್ಧಕ್ಕೆ ಬಿಟ್ಟ ಯುವಕರು ಕೌಶಲ್ಯ ಕಲಿತು ಸಮೀಪದ ಉದ್ಯಮಗಳಲ್ಲಿ ನೌಕರಿ ಪಡೆಯಲು ಅಥವಾ ಸ್ವ ಉದ್ಯೋಗ ಮಾಡಲು ಸಹಾಯವಾಗುತ್ತದೆ.
ಈ ಯೋಜನೆಯು ಕೇಂದ್ರದ ಮಾನವ ಸಂಪನ್ನೂಲ ಅಭಿವೃದ್ಧಿ ಇಲಾಖೆ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಇಲಾಖೆಯ ಯೋಜನೆಯಾಗಿದ್ದು 2022ರ ವೇಳೆಗೆ ಒಂದು ಕೋಟಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಗುರಿಹೊಂದಿದ್ದು ಈ ಯೋಜನೆಯ ಮೊದಲ ಕೌಶಲ್ಯ ತರಬೇತಿಯಾಗಿ ನಮ್ಮ ಕಾಲೇಜಿನಲ್ಲಿ ಮೆಟಲ್ ಆರ್ಕ್ ವೆಲ್ಡರ್ ಕೋರ್ಸ್ ಆರಂಭಿಸಲಾಗುತ್ತಿದೆ ಎಂದರು.
ಸಾಹಿತಿ ಅಣ್ಣಾಜಿ ಪಡತಾರೆ, ಬೆಳಗಲಿಯ ಮುರಾರ್ಜಿ ವಸತಿಶಾಲೆಯ ಶಿಕ್ಷಕಿ ಬಿ.ಎ. ಹೂಗಾರ, ಎಚ್.ವೈ. ಭಜಂತ್ರಿ ಮಾತನಾಡಿದರು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸುಭಾಸ ರಾಠೋಡ, ವಿಜಯಕುಮಾರ ಕುಳಲಿ, ಎಸ್.ಎಮ್. ಸುತಾರ, ಪ್ರವೀಣ ಅವರಾದಿ ಮತ್ತು ಮಹಾಲಿಂಗೇಶ ಪಟ್ಟಣಶೆಟ್ಟಿ ಇದ್ದರು. ಯು.ಡಿ. ಹಾದಿಮನಿ ಸ್ವಾಗತಿಸಿದರು. ರಾಚಣ್ಣ ಕಾಳಗಿ ಮತ್ತು ಯಮುನಪ್ಪ ಹೂಗಾರ ನಿರೂಪಿಸಿದರು. ಪರಶುರಾಮ ದಳವಾಯಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.