ADVERTISEMENT

ವೈವಿಧ್ಯತೆ ಮೆರೆವ ಕೆರೂರ ಓಕುಳಿ ಹಬ್ಬ

ಪ್ರಭು ಎಂ ಲಕ್ಷೆಟ್ಟಿ ಕೆರೂರ
Published 13 ಮಾರ್ಚ್ 2017, 5:43 IST
Last Updated 13 ಮಾರ್ಚ್ 2017, 5:43 IST

ಕೆರೂರ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿ ವರ್ಷವೂ ಹಲವು ಪದ್ಧತಿ, ಸಂಪ್ರದಾಯ ಆಗರವಾಗಿ ವೈವಿಧ್ಯತೆಯಿಂದ ಆಚರಿಸಲ್ಪಡುವ ಹೋಳಿ ಹಬ್ಬದ ಸಡಗರ, ಸಂಭ್ರಮಕ್ಕೆ ಶತಮಾನದ ಇತಿಹಾಸವಿದೆ.

ಯುವ ಪಡೆ ಉತ್ಸಾಹಕ್ಕೆ ಪಾರವೇ ಇಲ್ಲದಂತೆ ಬಣ್ಣದ ರಂಗು ಹಲವು ದಿನಗಳ ಕಾಲ ಗುಂಗು ಹಿಡಿಸುತ್ತದೆ. ಹೊಸ ಪೇಟೆ ಬಡಾವಣೆಯ ಬನಶಂಕರಿ ದೇಗುಲದಲ್ಲಿ ಪ್ರತಿಷ್ಠಾಪಿಸುವ ರತಿ, ಮನ್ಮಥ ಮತ್ತು ಕಾಮಣ್ಣನ ಗಚ್ಚಿನ ವಿಗ್ರಹಗಳು ಒಂದು ಶತಮಾನದ ಇತಿಹಾಸವಿದೆ.

ಇದೇ 13ರ ಸೋಮವಾರ ರತಿ, ಮನ್ಮಥ ಹಾಗೂ ಕಾಮಣ್ಣರ ಮೂರ್ತಿಗಳನ್ನು ಗಲ್ಲಿಯ ಯುವಕರು ಹೆಗಲ ಮೇಲೆ ಹೊತ್ತು ಮನೆಗಳಿಗೆ ತೆರಳುತ್ತಾರೆ. ಭಕ್ತರು ಮನೆಗೆ ಬರುವ ಕಾಮಣ್ಣನಿಗೆ ನೈವೇದ್ಯದೊಂದಿಗೆ ಆತನ ದಹನಕ್ಕೆ ಕಟ್ಟಿಗೆ, ಕುಳ್ಳು ನೀಡುವುದು ರೂಢಿಯಲ್ಲಿದೆ. ಕೆಲವೆಡೆ ಗಲ್ಲಿಯ ಯುವ ಪಡೆ ರಾತ್ರಿ ಕಟ್ಟಿಗೆ, ಬೆರಣಿ ಕಳ್ಳತನ ಮಾಡುವುದು ಉಂಟು.

ADVERTISEMENT

ನಂತರ ಮಧ್ಯಾಹ್ನದ ಹೊತ್ತಿಗೆ ಬನಶಂಕರಿ ದೇಗುಲ ಆವರಣಕ್ಕೆ ಬರುವ ಮೂರ್ತಿಗಳು ದೇವಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಸುತ್ತಮುತ್ತಲಿಂದ ಹಲಗೆ ಮೇಳಗಳು ತಮ್ಮ ತಾಳಕ್ಕೆ ತಕ್ಕ ಲಯದಿಂದ ನೆರೆದವರ ಗಮನ ಸೆಳೆಯುತ್ತವೆ. ಇದರಲ್ಲಿ ಹಲಗೆ ಬಡಿಯಲು ಯುವಕರಲ್ಲಿ ಪೈಪೋಟಿ ಸಹ ಹಲಗೆ ಮೇಳದವರಲ್ಲಿ ನಡೆಯುತ್ತದೆ. ಇದೇ ಕಾಮನ ಬೆಂಕಿ ಮನೆಗೊಯ್ದು ಕಡಲೆ ಬೀಜ ಹುರಿದು ತಿನ್ನುವ ಪದ್ಧತಿ ಹಿಂದಿನಿಂದಲೂ ಇದೆ. ಆ ಹುರಿದ ಕಡಲೆ ತಿಂದರೆ ಹಲ್ಲು ಗಟ್ಟಿಗೊಳ್ಳುತ್ತವೆ ಎಂಬ ನಂಬಿಕೆ ಹೋಳಿ ಪ್ರಿಯರಲ್ಲಿದೆ.

ಸರ್ಕಾರಿ ಕಾಮನ ಮೆರವಣಿಗೆ: ಇದಕ್ಕೂ ಮುನ್ನ ಕಿಲ್ಲಾಪೇಟೆಯ ಸರಕಾರಿ ಕಾಮನ ಭವ್ಯ ಮೆರವಣಿಗೆ, ಕಮತರ ಪರಿವಾರದ ನೈವೇದ್ಯ ಸಮರ್ಪಣೆ ಬಳಿಕ ಇದೇ 14ರ ಸೋಮವಾರ ಮಧ್ಯಾಹ್ನ ಬೀದಿಯಲ್ಲಿ ಹೊರಟು ಕೆರೆಯ ಹತ್ತಿರದ ಮೈದಾನದಲ್ಲಿ ಅಗ್ನಿಗೆ ಅರ್ಪಿಸುವ ಆಚರಣೆ ನೆಹರುನಗರ, ಹಳಪೇಟೆ, ಬಸರಿಗಿಡಪೇಟೆ ಬಡಾವಣೆಗಳಲ್ಲಿ ಕಾಮದಹನ ಹಲಗೆ ಮೇಳ, ಕಾಮದಹನದ ಸ್ಥಳದಲ್ಲಿ ಬೆಂಕಿ ಮಧ್ಯೆ ಕಡಲೆ ಗಡಿಗೆ ತೆಗೆಯಲು ಕಸರತ್ತು ಏರ್ಪಡುತ್ತದೆ.

**

ರಂಗಿನಾಟ
ಇಲ್ಲಿ ಹೆಣ್ಣು ಸೋಗು, ಜೀವಂತ ಶವದ ಸೋಗು ಮತ್ತು ಡಾವಣೆಗಳಲ್ಲಿ ನಡೆವ ಬಣ್ಣದ ಬಂಡಿಗಳ ಪ್ರದರ್ಶನ ಹೋಳಿ ಹಬ್ಬಕ್ಕೆ ರಂಗು ತರುತ್ತವೆ. ಪ್ರತಿ ಮನೆಗಳಲ್ಲಿ ಗೃಹಿಣಿಯರು ಹೋಳಿ ಹಬ್ಬಕ್ಕ ಹೋಯ್ಕೊಂಡ ಮಕ್ಕಳ ಬಾಯಿ, ಸಿಹಿಯಾಗಿರಲೆಂದು, ಬಣ್ಣದ ದಿನ ಹೂರಣದ ಹೋಳಿಗೆ, ತುಪ್ಪದ ಭೋಜನ ಇರುತ್ತದೆ. ಇವೆಲ್ಲದರ ನಡುವೆ ಯುವ ಪಡೆಯು ಹೋಳಿಯ ಗುಂಗು, ನಶೆಯ ಮತ್ತಿನಲ್ಲಿ ಕಾನೂನು, ಸುವ್ಯವಸ್ಥೆ ನಿರ್ವಹಣೆಗೆ  ಪೊಲೀಸರು ಮತ್ತು ಗೃಹ ರಕ್ಷಕರ ಪಹರೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.