ADVERTISEMENT

ಹೊಸ ಪಠ್ಯಪುಸ್ತಕ ಜಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:42 IST
Last Updated 18 ಜನವರಿ 2017, 5:42 IST
ಹೊಸ ಪಠ್ಯಪುಸ್ತಕ ಜಾರಿಗೆ ವಿರೋಧ
ಹೊಸ ಪಠ್ಯಪುಸ್ತಕ ಜಾರಿಗೆ ವಿರೋಧ   

ಬಾಗಲಕೋಟೆ: 2016–17ನೇ ಸಾಲಿನ ಹೊಸ ಪಠ್ಯೆ ಪುಸ್ತಕ ಜಾರಿಗೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ಮಂಗಳವಾರ ವಿದ್ಯಾ ಗಿರಿಯ ಕಾಲೇಜು ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಬಿ. ಗೊರವರ ಅವರಿಗೆ ಮನವಿ ಸಲ್ಲಿಸಲಾಯಿತು.

1ರಿಂದ 10ನೇ ತರಗತಿಗಳ ಪಠ್ಯ ಪುಸ್ತಕವನ್ನು ಪರಿಷ್ಕರಣ ಸಮಿತಿ ಯಾವುದೇ ಪರಿಷ್ಕರಣೆ ಮಾಡದೇ, ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಎಬಿವಿಪಿ        ಖಂಡಿಸುತ್ತದೆ. ರಾಜ್ಯ ಸರ್ಕಾರ ಟೆಂಡರ್‌ ಸಮಯದಲ್ಲಿ ಡಿಎಸ್‌ಇಆರ್‌ಟಿ, ಡಯಟ್‌, ಸಿಇಟಿ ಜೊತೆಗೆ ಎಲ್ಲ ಜಿಲ್ಲೆಗಳ ವಿಷಯ ಶಿಕ್ಷಕರ ವೇದಿಕೆಗಳಲ್ಲಿ ಚರ್ಚಿಸಿ, ಮುದ್ರಣಕ್ಕೆ ಕಳಿಸಬೇಕು. ಆದರೆ ಇದನ್ನು ಪರಿಗಣಿಸದೇ ರಾಜ್ಯ ಸರ್ಕಾರ ಪಠ್ಯಕ್ರಮ ಜಾರಿಗೆ ತರಲು ಮುಂದಾಗಿದೆ ಎಂದು ಎಬಿವಿಪಿ ಸಂಘಟನಾ ಕಾರ್ಯದರ್ಶಿ ವೆಂಕಟೇಶ ವಲದೂರು ಆರೋಪಿಸಿದರು.

ಯಾವುದೇ ಪೂರ್ವಾಪರ ಯೋಚನೆ ಮಾಡದೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ಮಕ್ಕಳು ಹಾಗೂ ಶಿಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿರ್ದಾರ ಕೈಗೊಳ್ಳುವದರಿಂದ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತದೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಶಿಕ್ಷಣ ಸಚಿವರು ಈ ವರ್ಷ ಹೊಸ ಪಠ್ಯಕ್ರಮ ಜಾರಿಗೆ ಮಾಡಲ್ಲ ಎಂದು ಹೇಳಿಕೆ ನೀಡಿದ್ದರು.

ಆದರೆ ಇಂದು ಮುಖ್ಯಮಂತ್ರಿ ಅವರು ಏಕಾಏಕಿ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಕೂಡಲೇ ರಾಜ್ಯ ಸರ್ಕಾರ ತನ್ನ ನಿಲುವನ್ನು ಬದಲಾಯಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಬಿವಿಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜೇಶ ಗುರಾಣಿ, ಯುವರಾಜ ಜಾಧವ, ನರೇಶ, ಮಲ್ಲು, ಪ್ರಶಾಂತ, ಸುನೀತಾ, ಸ್ವಪ್ನಾ, ಮಲ್ಲಿಕಾರ್ಜುನ, ಬಸವರಾಜ, ವಿಜಯ ಬಿಂಗೆ    ಸೇರಿದಂತೆ ನೂರಾರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.