ಬಾಗಲಕೋಟೆ: ಆಸ್ತಿ ವಿವರ ತಪ್ಪಾಗಿ ಸಲ್ಲಿಸಿದ ಕಾರಣ ಎರಡು ಪಟ್ಟು ದಂಡ ಸೇರಿಸಿ ಆರು ವರ್ಷದ ತೆರಿಗೆ ಬಾಕಿ ₹ 52.01 ಕೋಟಿ ಪಾವತಿಸುವಂತೆ ಇಲ್ಲಿನ ಬಾಗಲಕೋಟೆ ಸಿಮೆಂಟ್ಸ್ ಇಂಡಸ್ಟ್ರೀಸ್ಗೆ ನಗರಸಭೆ ಆಯುಕ್ತ ಎಸ್.ಎನ್.ರುದ್ರೇಶ ಸೋಮವಾರ ಆದೇಶಿಸಿದ್ದಾರೆ.
‘ಧಾರವಾಡ ಹೈಕೋರ್ಟ್ ಪೀಠದ ಆದೇಶದಂತೆ ನೈಸರ್ಗಿಕ ನ್ಯಾಯದ ದೃಷ್ಟಿಯಿಂದ ಕಂಪೆನಿಗೆ ತಕರಾರು ಸಲ್ಲಿಸಲು ಸಾಕಷ್ಟು ಅವಕಾಶ ನೀಡಲಾಗಿದೆ. ಆಸ್ತಿಗಳ ಸಮೀಕ್ಷೆ ಮಾಡಿ ಕರ್ನಾಟಕ ಪೌರಸಭೆಗಳ ಅಧಿನಿಯಮದ ಅಡಿಯಲ್ಲಿ ಸ್ವತ್ತುಗಳ ಮೇಲಿನ ತೆರಿಗೆ, ಅದರ ಮೇಲಿನ ಬಡ್ಡಿ ಮತ್ತು ಉಪ ಕರಗಳನ್ನು ಲೆಕ್ಕ ಮಾಡಿದಾಗ ಸಂಸ್ಥೆ 2009ರಿಂದ 2014ರ ವರೆಗೆ ₹17,34 ಕೋಟಿ ತೆರಿಗೆ ಕಟ್ಟಬೇಕಿತ್ತು. ಆದರೆ ವಿಚಾರಣೆ ವೇಳೆ ಸಂಸ್ಥೆ ಆಸ್ತಿ ವಿವರವನ್ನು ತಪ್ಪಾಗಿ ಸಲ್ಲಿಸಿದೆ.
ಹಾಗಾಗಿ ನಿಯಮಾವಳಿ ಅನ್ವಯ ಎರಡು ಪಟ್ಟು ದಂಡ ಸೇರಿ ₹ 52,04 ಕೋಟಿ ಪಾವತಿಸಬೇಕಿದೆ. ಆದರೆ ಕಾರ್ಖಾನೆ ವ್ಯಾಪ್ತಿಯ ವಸತಿಗೃಹಗಳ ಎಸ್ಎಎಸ್ ಮೊತ್ತ ₹ 2,65 ಲಕ್ಷ ಈಗಾಗಲೇ ಪಾವತಿಸಿರುವ ಕಾರಣ ಉಳಿದ ₹ 52.01 ಕೋಟಿ ಹಣ ತುಂಬಲು ಸೂಚಿಸಿರುವ ಅವರು, ಆದೇಶ ನೀಡಿದ 30 ದಿನಗಳ ಒಳಗಾಗಿ ಹಣ ತುಂಬುವಂತೆ ತಿಳಿಸಿದ್ದಾರೆ’ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.
ಪಿ.ಆರ್.ಒ ಪ್ರತಿಕ್ರಿಯೆ: ‘ಆಯುಕ್ತರು ನೀಡಿದ ಆದೇಶದ ಬಗ್ಗೆ ಕಂಪೆನಿಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ, ಮಂಗಳವಾರ ಪ್ರತಿಕ್ರಿಯೆ ನೀಡುವುದಾಗಿ ಕಂಪೆನಿಯ ಸಾರ್ವಜನಿಕ ಸಂಪರ್ಕಾ ಧಿಕಾರಿ (ಮಾರುಕಟ್ಟೆ ವಿಭಾಗ) ಚಂದ್ರಶೇಖರ ಭಾವೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.