ಅಮೀನಗಡ: ‘ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಡೆಯಲು ಶಿಕ್ಷಣ ಹಾಗೂ ಕಾನೂನಿನ ಅರಿವು ಅಗತ್ಯವಾಗಿದೆ’ ಎಂದು ತಾಲ್ಲೂಕು ಅಪರ ದಿವಾಣಿ ನ್ಯಾಯಾಧೀಶ ಗೌಡಾ ಜಗದೀಶ ರುದ್ರೆ ಹೇಳಿದರು.
ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯದಿಂದ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಸುವ್ಯವಸ್ಥೆಗಾಗಿ ವಿವಿಧ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳ ಉಲ್ಲಂಘನೆ ಆಗದಂತೆ ಜಾಗೃತಿವಹಿಸಬೇಕು’ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಹುನಕುಂಟಿ ಮಾತನಾಡಿ ‘ದೇಶದಲ್ಲಿ ಸಂವಿಧಾನಾತ್ಮಕ ಕಾನೂನುಗಳಲ್ಲಿ ಶಿಕ್ಷಣ ಕಲಿಕೆಗೆ ಮತ್ತು ಬದುಕಿಗೆ ಅನ್ವಯವಾಗುವಷ್ಟು ಕಾನೂನು ಜ್ಞಾನ ಪಡೆಯಬೇಕು. ಮತದಾನ ಪಡೆಯುವ ಅವಧಿಯಿಂದಲೆ ನಾವು ವಾಹನ ಚಾಲನೆ ಪರವಾನಗಿ ಮತ್ತು ಜೀವ ವಿಮಾ ನೋಂದಣಿ ಪಡೆಯುವುದು ಕಡ್ಡಾಯವಾಗಬೇಕು. ಕಾನೂನು ಚೌಕಟ್ಟಿನಲ್ಲಿರುವ ಬದುಕು ಸಮಾಜದಲ್ಲಿ ಸುಂದರವಾಗಿರುತ್ತದೆ’ ಎಂದು ಹೇಳಿದರು.
ಮಹಿಳಾ ದೌರ್ಜನ್ಯ ತಡೆ ಕಾಯ್ದೆಕುರಿತು ನ್ಯಾಯವಾದಿ ಎಸ್.ಆರ್.ಚಲವಾದಿ ಉಪನ್ಯಾಸ ನೀಡಿದರು. ಗ್ರಾಹಕರ ಹಿತರಕ್ಷಣಾ ಕಾಯ್ದೆ ಕುರಿತು ನ್ಯಾಯವಾದಿ ಆರ್.ಎಚ್.ಕೊಕಾಟಿ ಉಪನ್ಯಾಸ ನೀಡಿದರು. ಪಿ.ಎಸ್.ಐ ಚಂದ್ರಶೇಖರ.ಪಿ.ಬದ್ನೂರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎಂ.ಎನ್.ಭಮಸಾಗರ, ಆರ್.ಎಸ್.ಪಟ್ಟದಕಲ್ಲ, ಸಿದ್ದು.ಬಿ.ಸಜ್ಜನ, ಎಸ್.ಆರ್.ಐಹೊಳ್ಳಿ, ಎ.ಸಿ.ಗೌಡರ, ಸಿ.ಡಿ.ಪಿ.ಓ ಮುರಳೀಧರ ದೇಶಪಾಂಡೆ, ಪಟ್ಟಣ ಪಂಚಾಯಿತಿ ಸದಸ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.