ಜಮಖಂಡಿ: ‘ಆರು ವರ್ಷದೊಳಗಿನ ಮಕ್ಕಳು ಏನೇ ತಪ್ಪು ಮಾಡಿದರೂ ಕಾನೂನಿನಲ್ಲಿ ಅವರಿಗೆ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ತಪ್ಪು ಎಸಗುವ 6 ರಿಂದ 18 ವರ್ಷದೊಳಗಿನ ಮಕ್ಕಳ ಮನಪರಿವರ್ತನೆಗಾಗಿ ಬಾಲ ವಿಕಾಸ ಮಂದಿರಕ್ಕೆ ಸೇರಿಸಲಾಗುತ್ತದೆ’ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಸ್. ಜಿತೇಂದ್ರನಾಥ ಹೇಳಿದರು.
ಮಕ್ಕಳ ಹಕ್ಕುಗಳು ಕುರಿತು ನಗರದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕಾನೂನು ಅರಿವು–ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ್ಯ ವಿವಾಹ ನಿಷೇಧಿಸಲಾಗಿದೆ. 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತದೆ. ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಒಂದು ಇಲಾಖೆಯನ್ನೆ ತೆರೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ವೀಣಾ ನಾಯ್ಕರ ಮಾತನಾಡಿ, ಮಕ್ಕಳ ಹಿತರಕ್ಷಣೆ ಹೊಣೆಯನ್ನು ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಹಿಸಿದೆ. ಪೌಷ್ಠಿಕ ಆಹಾರ, ಕಾಲಕಾಲಕ್ಕೆ ಲಸಿಕೆ ಮತ್ತು ಚುಚ್ಚುಮದ್ದು ನೀಡುವ ಮೂಲಕ ಮಕ್ಕಳ ಬೆಳವಣಿಗೆಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂದರು.
ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ.ಎಂ. ಶೀನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಮೊಹ್ಮದ ಅನ್ವರ್ ಹುಸೇನ್ ಮೊಗಲಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲೆ ರಾಜಶ್ರೀ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ, ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ಪಾಟೀಲ, ಎಪಿಪಿ ಹುಸೇನ್ಸಾಬ್ ಮುಲ್ಲಾ, ಸಹಾಯಕ ಸಿಡಿಪಿಒ ಎಸ್.ಎಸ್. ತೇರದಾಳ, ವಕೀಲರಾದ ಆರ್.ಜೆ. ಶಹಾ, ಎಸ್.ಕೆ. ಹಾಲಳ್ಳಿ, ವಿಜಯ ಬಾಂಗಿ, ಎಂ.ಎಸ್. ರಾವಳೋಜಿ, ಯಶೋಧಾ ದಾಸರ ವೇದಿಕೆಯಲ್ಲಿದ್ದರು. ಮೇಲ್ವಿಚಾರಕಿ ರಾಜಶ್ರೀ ತಿಮ್ಮಾಪುರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.