ಕೂಡ್ಲಿಗಿ: ತಾಲ್ಲೂಕಿನ ಬೋರಯ್ಯನಹಟ್ಟಿ ಗ್ರಾಮ ಸಮೀಪ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದ್ದು, ತಕ್ಷಣವೇ ಕ್ರಷರ್ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿ ಸಿಪಿಐ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋರಯ್ಯನಹಟ್ಟಿ ಗ್ರಾಮದ ಪಕ್ಕದಲ್ಲಿಯೇ ಕೈಲಾಸ್, ಶಿವಸಾಯಿ ಹಾಗೂ ಎಲ್. ನಾಗೆಂದ್ರ ನಾಯ್ಕ್ ಸ್ಟೋನ್ ಕ್ರಷರ್ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪಕ್ಕದಲ್ಲಿಯೇ ಗ್ರಾಮ ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪುರಾತನ ಅಂಜನೇಯ ಸ್ವಾಮಿ ದೇವಸ್ಥಾನವಿದೆ. ಈ ಕ್ರಷರ್ಗಳು ಪರವಾನಗಿ ಪಡೆಯುವಾಗ ಈ ಜಾಗದಲ್ಲಿ ಯಾವುದೇ ದೇವಾಲಯ, ಗ್ರಾಮಗಳಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಹಗಲು ರಾತ್ರಿ ಭಾರಿ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಿಡಿಸುತ್ತಿರುವ ಕಾರಣ ಗ್ರಾಮದಲ್ಲಿನ ಮನೆಗಳು, ಶಾಲಾ ಕೊಠಡಿಗಳು, ದೇವಸ್ಥಾನ ಗೋಡೆಗಳು ಬಿರುಕು ಬಿಡುತ್ತಿವೆ. ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸ್ಫೋಟಿಸಿದ ಕಲ್ಲುಗಳು ರೈತರ ಜಮೀನಿಗಳಲ್ಲಿ ಬೀಳುತ್ತಿದ್ದು, ಕೃಷಿಗೆ ತೊಂದರೆಯಾಗಿದೆ. ಕ್ರಷರ್ ಸ್ಥಗಿತಗೊಳಿಸುವಂತೆ ಡಿ. 23 ರಂದು ಮನವಿ ಮಾಡಲು ಹೋದ ಕಾರಣಕ್ಕೆ ಕ್ರಷರ್ ಮಾಲೀಕರು ಗ್ರಾಮಸ್ಥರ ವಿರುದ್ಧವೇ ಗುಡೇಕೋಟೆ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ. ಕ್ರಷರ್ ಪರವಾನಗಿ ರದ್ದು ಮಾಡದಿದ್ದರೆ ತಾಲ್ಲೂಕು ಕಚೇರಿ ಮುಂದೆ ಅಹೋರಾತ್ರಿ ಧರಣಿ ಕೂರಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸಿ ಕ್ರಮ ಕಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಿಪಿಐ ತಾಲ್ಲೂಕು ಘಟಕದ ಕಾರ್ಯದರ್ಶಿ ಎಚ್. ವೀರಣ್ಣ, ಅಖಿಲ ಭಾರತ ಕಿಸನ್ ಸಭಾದ ಅಧ್ಯಕ್ಷ ರಾಜುಗೌಡ್ರು, ಗ್ರಾಮದ ಮುಖಂಡ ಮಂಜುನಾಥ, ರೇಣುಕಮ್ಮ, ಪುಜಾರಿ ಓಬಯ್ಯ, ದೊಡ್ಡ ಓಬಯ್ಯ, ದೊಡ್ದ ಮಾರಯ್ಯ, ಪುಟ್ಟಯ್ಯ, ಗಂಗಬೊಮ್ಮಯ್ಯ, ತಿಪ್ಪಯ್ಯ, ನಾಗರಾಜ, ಪಾಪಣ್ನ, ವಿನಾಯಕ, ಪಂಪಣ್ಣ, ನಿಂಗನಗೌಡ್ರು, ತಿಮ್ಮಣ್ಣ, ಪಾಲಯ್ಯ ಭಾಗಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.