ADVERTISEMENT

ಕುಬ್ಜತನ ಮೀರಿ ನಿಂತ ವಾಮನಮೂರ್ತಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಡಿಸೆಂಬರ್ 2017, 8:54 IST
Last Updated 3 ಡಿಸೆಂಬರ್ 2017, 8:54 IST
ಗೆದ್ದ ಪದಕಗಳೊಂದಿಗೆ ಸಿದ್ದಲಿಂಗ
ಗೆದ್ದ ಪದಕಗಳೊಂದಿಗೆ ಸಿದ್ದಲಿಂಗ   

ಹೊಸಪೇಟೆ: ಎಸ್‌.ಎಂ. ಸಿದ್ದಲಿಂಗ ಅವರಿಗೆ ಹುಟ್ಟಿನಿಂದಲೇ ಕುಬ್ಜತನ. ಅವರು ಹುಟ್ಟಿದಾಗ ಬದುಕುಳಿದದ್ದೇ ಹೆಚ್ಚು. ಇರುವ ಸ್ಥಿತಿಯಲ್ಲೇ ಇತರರಂತೆ ಸಹಜವಾಗಿ ಬದುಕಬೇಕು ಅಂದುಕೊಂಡಿದ್ದ ಅವರನ್ನು ಸಮಾಜ ಅಪಹಾಸ್ಯ, ವ್ಯಂಗ್ಯದ ಮಾತುಗಳಿಂದ ಚುಚ್ಚುತ್ತಿತ್ತು. ಈ ನೋವನ್ನೆಲ್ಲ ನುಂಗಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಹಿರಿದಾದ ಸಾಧನೆ ಮಾಡಿ ನೋವು ಮರೆತಿದ್ದಾರೆ. ಕೀಳಾಗಿ ಕಾಣುತ್ತಿದ್ದ ಜನ ಕೂಡ ಭೇಷ್‌ ಎಂದು ಹೊಗಳುತ್ತಿದ್ದಾರೆ.

ಡಿಸ್ಕಸ್‌ ಎಸೆತ, ಶಾಟ್‌ ಪಟ್‌ನಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.

ರಾಜ್ಯ ಮಟ್ಟದ ಕುಬ್ಜರ ಡಿಸ್ಕಸ್‌ ಎಸೆತದಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದರೆ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಐದು ಬಂಗಾರದ ಪದಕಗಳನ್ನು ಗಳಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅವರು ಗೆದ್ದ ಪದಕಗಳಿಗೆ ಸ್ವತಃ ಅವರಿಗೆ ಲೆಕ್ಕ ಇಲ್ಲ. 2013ರಲ್ಲಿ ಅಮೆರಿಕದ ಮಿಚಿಗನ್‌ನಲ್ಲಿ ನಡೆದ ವಿಶ್ವ ಕುಬ್ಜರ ಕ್ರೀಡಾಕೂಟದ ಡಿಸ್ಕಸ್‌ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಐದನೇ ಸ್ಥಾನ ಪಡೆದಿದ್ದರು.

ADVERTISEMENT

ಇಷ್ಟೇ ಅಲ್ಲ, ಶಾಟ್‌ಪಟ್‌ನಲ್ಲೂ ಇವರದು ಎತ್ತಿದ ಕೈ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹತ್ತು ಚಿನ್ನದ ಪದಕಗಳನ್ನು ಗಳಿಸಿದರೆ, ರಾಷ್ಟ್ರೀಯ ಮಟ್ಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಬೆಂಗಳೂರು, ನವದೆಹಲಿ, ಭುವನೇಶ್ವರ, ಪುಣೆ ಸೇರಿದಂತೆ ದೇಶದ ಹಲವೆಡೆ ನಡೆದ ಡಿಸ್ಕಸ್‌ ಎಸೆತ, ಶಾಟ್‌ಪಟ್‌ನಲ್ಲಿ ಅವರು ಹುಟ್ಟಿದ ಊರಿಗೆ ಕೀರ್ತಿ ತಂದಿದ್ದಾರೆ.

ಅಂದಹಾಗೆ ಸಿದ್ದಲಿಂಗ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯುವುದಕ್ಕೆ ವಿಶೇಷ ಕಾರಣವಿದೆ. 2011ರಲ್ಲಿ ಸಿದ್ದಲಿಂಗ ಅವರು ಬಳ್ಳಾರಿಯಲ್ಲಿ ಐ.ಟಿ.ಐ.ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರ ಗೆಳೆಯ ನಾಗರಾಜ ಅವರು ಬ್ಯಾಡ್ಮಿಂಟನ್‌ ನೋಡಲು ಜತೆ ಕರೆದೊಯ್ದಿದ್ದರು. ನಾಗರಾಜ ಅವರ ಮಾವ ತಿಮ್ಮಣ್ಣ ಎಂಬುವರು ವೀಲ್‌ ಚೇರ್‌ ಬ್ಯಾಡ್ಮಿಂಟನ್‌ನಲ್ಲಿ ಜಯಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಎರಡೂ ಕಾಲುಗಳನ್ನೇ ಕಳೆದುಕೊಂಡವರು ಸಾಧನೆ ಮಾಡ ಬಹುದಾದರೆ ನಾನೇಕೇ ಸಾಧನೆ ಮಾಡ ಬಾರದು ಎಂಬ ಛಲ ಸಿದ್ದಲಿಂಗ ಅವರ ಮನಸಲ್ಲಿ ಚಿಗುರೊಡೆಯಿತು. ತಿಮ್ಮಣ್ಣ ಅವರ ಸಲಹೆ ಮೇರೆಗೆ ಡಿಸ್ಕಸ್‌ ಎಸೆತ, ಶಾಟ್‌ಪಟ್‌ ಅಭ್ಯಾಸ ಶುರು ಮಾಡಿದರು.

ಸಿದ್ದಲಿಂಗ ಅವರು ಬೆಳಿಗ್ಗೆ ಐದು ಗಂಟೆಗೆ ಎದ್ದು ನಗರ ಹೊರವಲಯದ ಸಂಕ್ಲಾಪುರದಲ್ಲಿರುವ ಮನೆ ಎದುರಿನ ವಿಶಾಲ ಜಾಗದಲ್ಲಿ ಅಭ್ಯಾಸ ಮಾಡುತ್ತಿದ್ದರು. ನಂತರ ಸಂಜೆವರೆಗೆ ಡಿ.ಟಿ.ಪಿ. ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಪುನಃ ಸಂಜೆ ಬಂದು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. 2012ರಲ್ಲಿ ಬಳ್ಳಾರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಡಿಸ್ಕಸ್‌ ಎಸೇತದಲ್ಲಿ ಬೆಳ್ಳಿ ಪದಕ ಗಳಿಸಿದರು. ಅದೇ ವರ್ಷ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಅವರಿಗೆ ಆರ್ಥಿಕ ನೆರವು ಕೂಡ ಬರಲು ಆರಂಭವಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಬೇಕಾದ ತರಬೇತಿ ಪಡೆಯಲು ಸಾಧ್ಯವಾಯಿತು. ಇವರ ಸಾಧನೆಗೆ ‘ಮಾದರಿ ಯುವಕ’ ಸೇರಿದಂತೆ ಅನೇಕ ಪ್ರಶಸ್ತಿಗಳು ಒಲಿದು ಬಂದಿವೆ.

ಮುಂದಿನ ಗುರಿ ಏನೆಂದು ಸಿದ್ದಲಿಂಗ ಅವರನ್ನು ಪ್ರಶ್ನಿಸಿದರೆ, ‘ಅಂತರರಾಷ್ಟ್ರೀಯ ಮಟ್ಟದ ಡಿಸ್ಕಸ್‌ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಬೇಕೆಂಬ ಆಸೆ ಇದೆ. ಅದಕ್ಕಾಗಿ ಕಠಿಣ ಪರಿಶ್ರಮ ಮಾಡುತ್ತಿದ್ದೇನೆ’ ಎಂದಷ್ಟೇ ಹೇಳಿದರು.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಸಿದ್ದಲಿಂಗ ಅವರು ಕ್ರೀಡೆಯೊಂದಿಗೆ ಉಪ ಜೀವನಕ್ಕಾಗಿ ಸಂಕ್ಲಾಪುರದಲ್ಲಿನ ಅನ್ನಪೂರ್ಣೇಶ್ವರಿ ಪ್ರೌಢಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.