ಕೊಟ್ಟೂರು : ಕೆರೆ ಸ್ವಚ್ಚತೆಗೆ ಮುಂದಾಗಿರುವ ಯುವಪಡೆ, ವ್ಯಾಪಾರಿಗಳು, ಸಂಘಸಂಸ್ಥೆಗಳ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ ಎಂದು ಶಾಸಕ ಎಸ್.ಭೀಮನಾಯ್ಕ ಹೇಳಿದರು.ಪಟ್ಟಣದ ಕೆರೆಯ ಅಂಗಳದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯವನ್ನು ಭಾನುವಾರ ವೀಕ್ಷಿಸಿ ಮಾತನಾಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೆರೆಯ ಹೂಳೆತ್ತಲು ನೀಡುವ ₹1 ಕೋಟಿ ಅನುದಾನವನ್ನು 2017–18ನೇ ಸಾಲಿನಲ್ಲಿ ಮಂಜೂರು ಮಾಡುವುದಾಗಿ ತಿಳಿಸಿದರಲ್ಲದೆ ಸುಮಾರು 800 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯ ಹೂಳೆತ್ತಲು ₹1 ಕೋಟಿ ಸಾಲದು ಅದಕ್ಕಾಗಿ ಮುಖ್ಯಮಂತ್ರಿಗಳನ್ನು ಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಸುಮಾರು 5 ಕೋಟಿ ಹಣವನ್ನು ಹೂಳೆತ್ತಲು ವಿಶೇಷ ಅನುದಾನ ತರುವುದಾಗಿ ತಿಳಿಸಿದರು.
ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ₹18 ಲಕ್ಷ ಮಂಜೂರಾಗಿದ್ದು ಇದರಲ್ಲಿ ₹6 ಲಕ್ಷವನ್ನು, ಎಂ.ಐ ಅನುದಾನದಡಿಯಲ್ಲೂ ಸಹ ₹6 ಲಕ್ಷ ಹಣವನ್ನು ನೀಡುತ್ತೇನೆ ಎಂದರು.
ಅಲ್ಲದೆ ಸುತ್ತಮುತ್ತಲಿನ 6 ಗ್ರಾಮ ಪಂಚಾಯ್ತಿಗಳು ತಲಾ ಕನಿಷ್ಟ 500 ರಿಂದ 1000 ಕೃಷಿ ಕಾರ್ಮಿಕರನ್ನು ಉದ್ಯೋಗ ಖಾತ್ರಿ ಅಡಿಯಲ್ಲಿ ಕೊಟ್ಟೂರು ಕೆರೆಯ ಹೂಳೆತ್ತಲು ನಿಯೋಜಿಸುವಂತೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಲಾಗಿದೆ ಎಂದರು. ಹತ್ತು ದಿನಗಳೊಳಗಾಗಿ ಕೆರೆಯ ಸಂಪೂರ್ಣ ಸರ್ವೆ ಕಾರ್ಯವನ್ನು ಮುಗಿಸಿ ಗಡಿ ನಿಗದಿಪಡಿಸಿಕೊಡುವಂತೆ ತಹಶೀಲ್ದಾರರಿಗೆ ತಿಳಿಸಲಾಗಿದೆ ಎಂದರು.
ಸತತ ಬರಗಾಲಕ್ಕೆ ತುತ್ತಾಗುತ್ತಿರುವ ಈ ಪ್ರದೇಶವನ್ನು ಶಾಶ್ವತವಾಗಿ ನೀರಾವರಿ ಸೌಲಭ್ಯ ಕಲ್ಪಿಸಲು ಭದ್ರಾ ಮೇಲ್ದಂಡೆ ಯೋಜನೆಯೊಂದೆ ದಾರಿಯಾಗಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಭಾಗಕ್ಕೂ ವಿಸ್ತರಿಸುವಂತೆ ಕೋರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವ ಪಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.