ಕೊಟ್ಟೂರು : ಕಾರ್ತೀಕ ಮಾಸದ ದೀಪಾವಳಿ ಪಾಡ್ಯದ ದಿನವಾದ ಶುಕ್ರವಾರದಂದು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ರಾತ್ರಿ 11 ಗಂಟೆಗೆ ಸಕಲ ಮಂಗಳ ವಾದ್ಯ ಮೇಳಗಳೊಂದಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿಯು ಹಿರೇಮಠದಿಂದ ಗಚ್ಚಿನ ಮಠಕ್ಕೆ ಸಾಗಿ ಪುನಾ ಹಿರೇಮಠವನ್ನು ಬೆಳಗಿನ ಜಾವ ತಲುಪಿತು.
ದೀಪಾವಳಿ ಪಾಡ್ಯದ ದಿನದಂದು ಪ್ರಾರಂಭವಾಗುವ ಸ್ವಾಮಿಯ ಉತ್ಸವವು ಕಾರ್ತಿಕೋತ್ಸವದವರೆಗೂ ಪ್ರತಿ ಸೋಮವಾರ ಮತ್ತು ಗುರುವಾರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಇಡೀ ರಾತ್ರಿ ಉತ್ಸವ ಆಚರಿಸುವ ಸಂಪ್ರದಾಯವಿದೆ.
ಹಿರೇಮಠದಿಂದ ಹೊರಟ ಸ್ವಾಮಿಯ ಉತ್ಸವ ಕರೇಗಲ್ಲು ಸಮೀಪ ಬಂದಾಗ ಅರ್ಚಕರು ಸ್ವಾಮಿಯ ಮೂಲಮಠವಾದ ಮೂರುಕಲ್ಲು ಮಠಕ್ಕೆ ತೆರಳಿ ದೀಪ ಬೆಳಗಿಸಿ ಬಂದ ನಂತರ ಸ್ವಾಮಿಯ ಮೆರವಣಿಗೆ ತೊಟ್ಟಿಲು ಮಠ ತಲುಪಿದಾಗ ಪ್ರಸಾದ ಹಾಗೂ ತಾಂಬೂಲವನ್ನು ಎಡೆ ಮಾಡಿ ನೆರೆದ ಭಕ್ತ ಸಮೂಹಕ್ಕೆ ವಿತರಿಸಲಾಯಿತು.
ನಂತರ ಊರಮ್ಮನ ಬಯಲಿನಲ್ಲಿ ಸ್ವಾಮಿಯನ್ನು ಕೂಡಿಸಿ ಭಕ್ತರು ಒಡಪುಗಳನ್ನು ಹೇಳಿದ ಮೇಲೆ ಸಾಗಿದ ಉತ್ಸವವು ಸ್ವಾಮಿಯ ಯೋಗಸಮಾಧಿ ಇರುವ ಗಚ್ಚಿನಮಠಕ್ಕೆ ತೆರಳಿತು.
ಗಚ್ಚಿನಮಠದಿಂದ ಬೆಳಗಿನ ಜಾವದ ವೇಳೆಗೆ ದರ್ಬಾರು ಮಠವಾದ ಹಿರೇಮಠಕ್ಕೆ ಪುನಾ ತಲುಪಿ ಮಂಗಳಾರತಿಯ ನಂತರ ಭಕ್ತರ ಜಯಘೋಷಗಳೊಂದಿಗೆ ಸ್ವಾಮಿಯು ವಿರಾಜಮಾನವಾಗುವುದರ ಮುಖಾಂತರ ಉತ್ಸವ ಸಂಪನ್ನವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.