ಬಳ್ಳಾರಿ: ಕ್ಷಯ ರೋಗ ಪತ್ತೆಯಾದ ಪ್ರಾಥಮಿಕ ಹಂತದಲ್ಲೇ ಆರೇಳು ತಿಂಗಳ ಕಾಲ ಚಿಕಿತ್ಸೆಯನ್ನು ಪಡೆಯದಿದ್ದರೆ ಕನಿಷ್ಠ ಎರಡು ವರ್ಷ ಚಿಕಿತ್ಸೆ ಪಡೆಯಲೇಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ನಟರಾಜ ಹೇಳಿದರು.
ನಗರದ ಕೌಲ್ಬಜಾರ್ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷಯರೋಗವನ್ನು ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆಯಿಂದ (ಡಾಟ್ಸ್) ಸಂಪೂರ್ಣವಾಗಿ ಗುಣಪಡಿಸಬಹುದು.
ಅದಕ್ಕೆ 6ರಿಂದ -8 ತಿಂಗಳು ತಪ್ಪದೇ ಚಿಕಿತ್ಸೆಯನ್ನು ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಚಿಕಿತ್ಸೆಯನ್ನು ಸರಿಯಾಗಿ ಪಡೆಯದಿದ್ದರೆ ಅದು ಬಹು ಔಷಧಿ ಪ್ರತಿರೋಧ ಕ್ಷಯರೋಗವಾಗಿ ಮಾರ್ಪಾಡಾಗುತ್ತದೆ. ಆಗ ದೀರ್ಘಾವಧಿ ಚಿಕಿತ್ಸೆ ಅನಿವಾರ್ಯ ಎಂದರು.
ಮನೆ ಭೇಟಿ: ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಯರು ಕ್ಷಯರೋಗವನ್ನು ಪತ್ತೆ ಹಚ್ಚಲು ಮನೆಗಳಿಗೆ ಭೇಟಿ ನೀಡಲಿದ್ದಾರೆ. ಸಾರ್ವ ಜನಿಕರು ಸಹಕರಿಸಿ ರೋಗ ನಿರ್ಮೂಲ ನೆಗೆ ಬೆಂಬಲ ನೀಡಬೇಕು.
ಮನೆಯಲ್ಲಿ ಹಾಗೂ ಸುತ್ತಮುತ್ತಲಿ ನವರಲ್ಲಿ ರೋಗದ ಲಕ್ಷಣಗಳು ಕಂಡುಬಂದರೆ ಹತ್ತಿರದ ಕಫ ಪರೀಕ್ಷೆ ಕೇಂದ್ರಕ್ಕೆ ಕರೆತರಬೇಕು ಎಂದು ಕೋರಿದರು. ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಜಿ.ರಮೇಶ್ ಬಾಬು ಮಾತನಾಡಿದರು.
ಪಾಲಿಕೆ ಸದಸ್ಯೆ ನಸ್ರೀನ್ ಬೇಗಂ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಚ್. ನಿಜಾ ಮುದ್ದೀನ್, ಜಿಲ್ಲಾ ಕುಷ್ಠರೋಗ ಕಾರ್ಯ ಕ್ರಮ ಅನುಷ್ಠಾನ ಅಧಿಕಾರಿ ಡಾ.ರಾಜ ಶೇಖರ ರೆಡ್ಡಿ, ಜಿಲ್ಲಾ ಮಲೇ ರಿಯಾ ನಿಯಂತ್ರಣಾಧಿಕಾರಿ ಡಾ.ಓಂ ಪ್ರಕಾಶ ಕಟ್ಟಿಮನಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಆರ್.ವಿಜಯ ಲಕ್ಷ್ಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.