ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಕಡಲಬಾಳು ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿನ ಬಾಡಿಗೆ ಮೊತ್ತ ದುರ್ಬಳಕೆ ಕುರಿತಂತೆ ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿಯಿಂದ ನೀರು ಪಡೆಯದೆ ಒಟ್ಟು ₹ 35,568 ಮೊತ್ತದ ಚೆಕ್ ನೀಡಲಾಗಿದೆ. ಇದರಲ್ಲಿ ಸ್ವಲ್ಪ ಹಣವನ್ನು ಕೊಳವೆ ಬಾವಿ ಮಾಲೀಕರಿಗೆ ನೀಡಿ ಉಳಿದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜಾಣ ಅನಿಲ್ಕುಮಾರ್ ದೂರು ಸಲ್ಲಿಸಿದ್ದರು.
ವಿಚಾರಣೆಯಲ್ಲಿ ಗ್ರಾಮ ಪಂಚಾಯಿತಿ ನೀರುಗಂಟಿ ತಿಪ್ಪಣ್ಣ, ಖಾಸಗಿ ಕೊಳವೆ ಬಾವಿಯಿಂದ ಕೇವಲ ಒಂದು ದಿನ ನೀರು ಪಡೆಯಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಒಂಟಿಗೋಡಿ ವೀರೇಶ್ ಅವರು ನೀರಗಂಟಿ ಮಾತಿಗೆ ಬೆಂಬಲ ಸೂಚಿಸಿದರು.ಇದೇ ಸಂದರ್ಭದಲ್ಲಿ ಸದಸ್ಯ ಹನುಮಂತಪ್ಪ ಮಾತನಾಡಿ, 1 ತಿಂಗಳು ಕಾಲ ನೀರು ಪಡೆಯಲಾಗಿದೆ ಎಂದರು. ಕೆಲವರು ಅಧ್ಯಕ್ಷರ ಪರವಾಗಿ ಮಾತನಾಡಿದರು.
ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ತಾಲ್ಲೂಕು ಪಂಚಾಯಿತಿ ಇಒ ಬಿ.ಮಲ್ಲಾನಾಯ್ಕ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರಿಂದ ಮೊತ್ತ ದುರ್ಬಳಕೆ ಕುರಿತಂತೆ ಮಾಹಿತಿ ಪಡೆಯಲಾಗಿದೆ. ಈ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಅವರ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ತಹಶೀಲ್ದಾರ್ ಆನಂದಪ್ಪ ನಾಯಕ, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಪ್ರಭಾಕರ ಶೆಟ್ಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖಾಜಬನ್ನಿ, ಸದಸ್ಯರಾದ ಬ್ಯಾಟಿ ನಾಗರಾಜ, ಮಾಗಳ ನಿಂಗಪ್ಪ, ಸೋಬಟಿ ಭೀಮಪ್ಪ, ಎಸ್.ವೀರೇಶ, ಫಕ್ಕೀರಪ್ಪ, ಕೆ.ಹನುಮಂತಪ್ಪ, ಮುಖಂಡರಾದ ಆರ್.ವೆಂಕಟೇಶ್, ಶರಣಯ್ಯ, ಗಿಡ್ಡಪ್ಪ, ಕೇಶಪ್ಪ, ಅಂಜಿನಪ್ಪ, ಕೆ.ಶಿವರಾಮ, ದೊಡ್ಡಬಸವರಾಜ, ವಿಶ್ವನಾಥ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.