ಕಂಪ್ಲಿ: ಸಮೀಪದ ಮೆಟ್ರಿ ಗ್ರಾಮದ ಪ್ರಣವಜ್ಯೋತಿ ಮಹಾ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ವಿಶ್ವಾರಾಧ್ಯ ಗುರುಕುಲ ಮಠದಲ್ಲಿ ಪಂಚಪೀಠಾಧೀಶ್ವರ ಶಿಲಾ ಮೂರ್ತಿಗಳು, ಉಜ್ಜಯಿನಿ ಸಿದ್ಧಲಿಂಗೇಶ್ವರ ಮತ್ತು ಎಮ್ಮಿಗನೂರು ಜಡೆಸಿದ್ದೇಶ್ವರ, ನವಗ್ರಹ, ಗಣೇಶ, ಶ್ರೀಕ್ಷೇತ್ರ ಸ್ಥಾಪಕರಾದ ಮಹಾ ದೇವತಾತ, ಗೌರಮ್ಮನವರ ಶಿಲಾ ಮೂರ್ತಿಗಳಿಗೆ ಭಕ್ತರು ವಿಶೇಷ ರುದ್ರಾಭಿಷೇಕ ನೆರವೇರಿಸಿದರು.
ಇದಕ್ಕೂ ಮುನ್ನಾ ದಿನ ಕ್ರಮವಾಗಿ ಪಂಚಾಪೀಠಾಧೀಶ್ವರರ ಉತ್ಸವ ಮೂರ್ತಿಗಳ ಅಡ್ಡಪಲ್ಲಕ್ಕಿ, ಪ್ರಣವೋ ತ್ಸವ, ಗೋವೋತ್ಸವ, ಭಸ್ಮೋತ್ಸವ, ಗೀತೋತ್ಸವ, ಗಂಗೆಸ್ಥಳ ಕಾರ್ಯಕ್ರಮ ಗಳು ಶ್ರದ್ಧೆ ಹಾಗೂ ಭಕ್ತಿಯಿಂದ ನಡೆದವು. ಮಹಾರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಮಹಾರಥೋತ್ಸವವು ಮಠದಿಂದ ಆರಂಭಗೊಂಡು ಗ್ರಾಮದ ಮುಖ್ಯರಸ್ತೆ (ರಾಜ್ಯ ಹೆದ್ದಾರಿ) ಮೂಲಕ ಎದುರು ಬಸವಣ್ಣನವರೆಗೆ ತಲುಪಿ ಪುನಾ ಶ್ರೀಮಠಕ್ಕೆ ಬಂದು ತಲುಪಿತು. ಬಳ್ಳಾರಿ, ಕೊಪ್ಪಳ, ರಾಯಚೂರು, ನೆರೆ ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿ ರಾರು ಭಕ್ತರು ತೇರಿಗೆ ಹೂವು, ಹಣ್ಣು, ಉತ್ತತ್ತಿ ತೂರಿ ಭಕ್ತಿ ಸಮರ್ಪಿಸಿದರು.
ವಿವಿಧ ವಾದ್ಯ ತಂಡಗಳು ಭಾಗ ವಹಿಸಿ ಮೆರಗು ನೀಡಿದವು. ರಥೋತ್ಸವ ಅಂಗವಾಗಿ ಮಠದಲ್ಲಿ ಹಮ್ಮಿಕೊಂಡ್ದಿದ ‘ಮಹಾ ದಾಸೋಹಿ ಶರಣಬಸವೇಶ್ವರ ಮಹಾ ಪುರಾಣ’ ವಿವಿಧ ಮಠಾಧೀಶರ ಮತ್ತು ಭಕ್ತರ ಸಮ್ಮುಖದಲ್ಲಿ ಮಹಾಮಂಗಲ ಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.