ADVERTISEMENT

‘ಪ್ರಯಾಣಿಕರ ಕುಂದುಕೊರತೆ ವಿಚಾರಿಸದ ಸಾರಿಗೆ ಸಂಸ್ಥೆಯ ಅಧ್ಯಕ್ಷ’

ಡಿಪೋ, ನಿಲ್ದಾಣಕ್ಕೆ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 10:54 IST
Last Updated 21 ಡಿಸೆಂಬರ್ 2017, 10:54 IST
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಇಲಿಯಾಸ್ ಶೇಖ್ ಬಾಗಬಾನ್ ಬಸ್‌ ಪ್ರಯಾಣಿಕರೊಂದಿಗೆ ಮಾತನಾಡಿದರು
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಇಲಿಯಾಸ್ ಶೇಖ್ ಬಾಗಬಾನ್ ಬಸ್‌ ಪ್ರಯಾಣಿಕರೊಂದಿಗೆ ಮಾತನಾಡಿದರು   

ಹೊಸಪೇಟೆ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇಲಿಯಾಸ್ ಶೇಖ್ ಬಾಗಬಾನ್ ಅವರು ನಗರದ ಬಸ್‌ ನಿಲ್ದಾಣ, ಬಸ್‌ ಡಿಪೋಗೆ ಭೇಟಿ ನೀಡಿ ಪ್ರಯಾಣಿಕರು, ನೌಕರರ ಕುಂದುಕೊರತೆ ಆಲಿಸಿದರು.

ಬಸ್‌ ಡಿಪೋದಲ್ಲಿ ವರ್ಕ್‌ಶಾಪ್‌ ಮತ್ತು ಆಡಳಿತ ಕಚೇರಿ ಇರುವುದನ್ನು ಗಮನಿಸಿ, ಒಂದನ್ನು ಬೇರೆ ಕಡೆ ಸ್ಥಳಾಂತರಿಸುವ ಕುರಿತಂತೆ ಚಿಂತನೆ ನಡೆಸಲಾಗುವುದು ಎಂದರು.

ಸಂಸ್ಥೆಯ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಸಮಸ್ಯೆಗಳಿದ್ದರೆ ಮುಕ್ತವಾಗಿ ಹೇಳುವಂತೆ ತಿಳಿಸಿದರು. ಅಲ್ಲಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿದರು. ಕೆಲವು ಬಸ್‌ಗಳಲ್ಲಿ ಹೋಗಿ ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳ ಕುರಿತಂತೆ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಮೀಸಲಾಗಿದ್ದ ಆಸನಗಳಲ್ಲಿ ಕುಳಿತಿದ್ದ ಪುರುಷರನ್ನು ಎಬ್ಬಿಸಿ ಬೇರೆ ಆಸನಗಳಿಗೆ ಕಳುಹಿಸಿದರು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ಉತ್ತಮ ನಿರ್ವಹಣೆ ಇದೆ. ಹೊಸಪೇಟೆಯಲ್ಲಿ ವರ್ಕ್‌ಶಾಪ್, ಬಸ್ ಡಿಪೋ ಎರಡೂ ಒಂದೇ ಕಡೆ ಇದೆ.

ಆದ್ದರಿಂದ ನಗರದ ಜಂಬುನಾಥ ರಸ್ತೆಯಲ್ಲಿ ಏಳು ಎಕರೆ ಸರ್ಕಾರಿ ಜಮೀನಿನಲ್ಲಿ ವರ್ಕ್‌ಶಾಪ್‌ ಸ್ಥಳಾಂತರಿಸಲಾಗುತ್ತದೆ. ಕೇಂದ್ರ ಬಸ್ ನಿಲ್ದಾಣ ಸಮೀಪದ ಪೊಲೀಸ್ ಠಾಣೆಗೆ ಸೇರಿದ ಒಂದು ಎಕರೆ ನಿವೇಶನ ಪಡೆದು ಅಲ್ಲಿ ಗ್ರಾಮೀಣ ಬಸ್‌ ನಿಲ್ದಾನ ನಿರ್ಮಿಸು ಚಿಂತನೆ ಇದೆ. ಇದಕ್ಕಾಗಿ ₹4ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 1250 ಹೆಚ್ಚುವರಿ ಹೊಸ ಬಸ್ ಗಳು ಬರಲಿವೆ. ಹೊಸಪೇಟೆ ವಿಭಾಗಕ್ಕೆ 25 ಹೊಸ ಬಸ್‌ಗಳನ್ನು ನೀಡಲಾಗಿದೆ ಎಂದರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸದ್ಯ ನಷ್ಟದಲ್ಲಿದೆ. ಕೇಂದ್ರ ಸರ್ಕಾರ ಮೋಟಾರ್ ವಾಹನಗಳ ಮೇಲಿನ ತೆರಿಗೆ ವಾಪಸ್ ಪಡೆದಲ್ಲಿ ಸಂಸ್ಥೆಗೆ ಲಾಭವಾಗಲಿದೆ. ವಿದ್ಯಾರ್ಥಿಗಳು ಮತ್ತು ಅಂಗವಿಕಲರ ಪಾಸ್‌ಗಳಿಗ ನೀಡಲಾದ ₹140ಕೋಟಿ ಗಳನ್ನು ಬಿಡುಗಡೆಗೊಳಿಸಬೇಕಾಗಿದೆ ಎಂದರು.

ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹ್ಮದ್ ಯಾಜ್, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಟಿ.ರವಿ, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಕೆ.ಕೆ.ಲಮಾಣಿ ಇದ್ದರು.

*
ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 1250 ಹೆಚ್ಚುವರಿ ಹೊಸ ಬಸ್ ಗಳು ಬರಲಿವೆ. ಹೊಸಪೇಟೆ ವಿಭಾಗಕ್ಕೆ 25 ಹೊಸ ಬಸ್‌ಗಳನ್ನು ನೀಡಲಾಗುವುದು.
–ಮಹ್ಮದ್ ಇಲಿಯಾಸ್ ಶೇಖ್ ಬಾಗಬಾನ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.