ಬಳ್ಳಾರಿ: ಸುಪ್ರಿಂ ಕೋರ್ಟ್ ನೀಡಿರುವ ಬಡ್ತಿ ಮೀಸಲಾತಿಯ ತೀರ್ಪು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಇದೇ 10ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಾಗೂ ಸಮಾವೇಶ ನಡೆಸಲಾಗುವುದು’ ಎಂದು ಅಹಿಂಸಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಲ್.ಕೃಷ್ಣರೆಡ್ಡಿ ತಿಳಿಸಿದರು.
‘ಸಮಾವೇಶಕ್ಕೆ ಜಿಲ್ಲೆಯಿಂದ 16 ಬಸ್ ಹೊರಡಲಿವೆ. ಅಲ್ಲದೇ ಸಾವಿರ ಜನರು ಭಾಗವಹಿಸಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಸುಮಾರು 10 ಬಸ್ಗಳಿಂದ ಸಮಾವೇಶಕ್ಕೆ ಬರಲಿವೆ. ಅಂದಾಜು 1 ಲಕ್ಷ ಜನ ಸೇರುವ ಸಾಧ್ಯತೆ ಇದೆ. ಮೆರವಣಿಗೆಯು ಪ್ರೀಡಂ ಪಾರ್ಕ್ನಿಂದ ಅರಮನೆ ಆವರಣ ತ್ರಿಪುರ ವಾಸಿನಿವರೆಗೆ ನಡೆಸಲಾಗುವುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಈಗಾಗಲೇ ಸರ್ಕಾರ ಬಿಲ್ ಅನುಮೋದನೆಗೆ ರಾಜ್ಯಪಾಲರಿಗೆ ಅನುಮತಿ ಕೋರಿತ್ತು. ಆದರೆ, ರಾಜ್ಯಪಾಲರು ಎರಡು ಬಾರಿ ಅದನ್ನು ತಿರಸ್ಕೃತ ಮಾಡಿದ್ದರು. ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಮೂಲಕ ಬಿಲ್ ಅನುಮೋದನೆ ಮಾಡಲು ಸಿದ್ಧತೆ ನಡೆಸಿದೆ. ಅಲ್ಲದೇ, ಮುಖ್ಯಮಂತ್ರಿ ಅವರು ಈ ಅಧಿಕೃತವಾಗಿ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ ಬಿಲ್ಗೆ ಸಹಿ ಹಾಕದಂತೆ ಜನಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.
‘ಮೀಸಲಾತಿ ವರ್ಗದವರಿಗೆ ಕೇವಲ 3ರಿಂದ 5 ವರ್ಷ ಸೇವಾವಧಿಯಲ್ಲಿ ಬಡ್ತಿ ದೊರೆಯುತ್ತದೆ. ಆದರೆ, ಸಾಮಾನ್ಯ ವರ್ಗದವರಿಗೆ 20ರಿಂದ 25 ವರ್ಷ ಸೇವಾವಧಿ ನಂತರ ಸಿಗುತ್ತದೆ. ಮೀಸಲಾತಿ ವರ್ಗದವರು ಶೇ.18 ರಷ್ಟು ಹೆಚ್ಚಿನ ಪ್ರಾತಿನಿಧ್ಯ ಪಡೆಯುತ್ತಿದ್ದಾರೆ.
ಇದರಿಂದ ಶೇ 82 ವರ್ಗದವರಿಗೆ ಬಡ್ತಿ ಅವಕಾಶಗಳು ದೊರೆಯುತ್ತಿಲ್ಲ ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡರಾದ ವಿ.ಪಿ.ಉದ್ದೇಹಾಳ್, ಮಧುಸೂಧನ್, ಚಂದ್ರಶೇಖರ್, ತಿಪ್ಪೇಸ್ವಾಮಿ, ಮೆಹತಾಬ್, ಬಿ.ಪಂಪನಗೌಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.