ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಪಟ್ಟಣದ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ಬುಧವಾರ ಬಂದ ಅತಿಥಿಗಳನ್ನು ಇಡೀ ತಾಲ್ಲೂಕು ಆಡಳಿತವೇ ಸ್ವಾಗತಿಸುತ್ತಿತ್ತು. ‘ಸಂಬಂಧಿಕರ ಮದುವೆಯಲ್ಲಿ ಅಧಿಕಾರಿಗಳಿಗೇನು ಕೆಲಸ’ ಎಂದು ಅಚ್ಚರಿ ಪಟ್ಟ ನೂರಾರು ಮಂದಿಗೆ ಮತದಾನದ ಕುರಿತು ಜಾಗೃತಿ ಮೂಡಿಸಿದ್ದು ವಿಶೇಷ.ಮದುವೆ ಮನೆಯು ಮತದಾನ ಜಾಗೃತಿ ವೇದಿಕೆಯಾಗಿ ಮಾರ್ಪಟ್ಟಿತ್ತು.
ನವ ದಂಪತಿ ಎಂ.ಎರ್ರಿಸ್ವಾಮಿ ಹಾಗೂ ಪವಿತ್ರಾ ದಾಂಪತ್ಯದ ಪ್ರತಿಜ್ಞೆ ಸ್ವೀಕರಿಸುವುದರ ಜೊತೆಗೆ, ಕಡ್ಡಾಯ ಮತ್ತು ನೈತಿಕ ಮತದಾನ ಮಾಡುವ ಪ್ರತಿಜ್ಞೆ
ಯನ್ನೂ ಸ್ವೀಕರಿಸಿ ಮಾದರಿ ಎನಿಸಿದರು.
ಅಕ್ಷತೆ ಕಾಳು ಹಾಕಿ, ನವದಂಪತಿಗಳನ್ನು ಆಶೀರ್ವದಿಸಿ ಹೋಗಲು ಬಂದಿದ್ದವರೆಲ್ಲರೂ ಕೈ ಮುಂದೆ ಚಾಚಿ ಕಡ್ಡಾಯವಾಗಿ ಮತದಾನ ಮಾಡುತ್ತೇವೆಂದು ಪ್ರತಿಜ್ಞೆ ಸ್ವೀಕರಿಸಿದರು.
‘ಮದುವೆ ಮನೆ ಎಂದರೆ ಕೌಟುಂಬಿಕ ಸಂಭ್ರಮವಷ್ಟೇ ಅಲ್ಲ. ಚುನಾವಣೆಯಂಥ ಸಾರ್ವಜನಿಕ ಚಟುವಟಿಕೆಯಲ್ಲಿ ಮತದಾನದ ಮಹತ್ವವನ್ನೂ ಸಾರಬಹುದು ಎಂಬುದಕ್ಕೆ ಈ ಮದುವೆ ಸಾಕ್ಷಿಯಾಗಿದೆ. ಇಂಥ ಕಾರ್ಯಕ್ರಮಗಳು ಹಲವು ನಡೆಯಲಿ. ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಲಿ’ ಎಂದು ಬಸವಭೂಷಣ ಸ್ವಾಮೀಜಿ ಅವರು ಹೇಳಿದರು.
ಮದುಮಗ ಎರ್ರಿಸ್ವಾಮಿ ಅವರ ತಂದೆ ಎಂ.ಶಂಕರಗೌಡರ ಕೋರಿಕೆ ಮೇರೆಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ಪ ಸುಬೇದಾರ್ ಮತ್ತು ನಗರಸಭೆ ಆಯುಕ್ತ ಮರಿಲಿಂಗಪ್ಪ ಬೆಂಬಲ ಸೂಚಿಸಿ, ಮತದಾನ ಜಾಗೃತಿಗೆ ವೇದಿಕೆ ಸಿದ್ಧಪಡಿಸಿದ್ದರು.
‘ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಯುವಜನರಲ್ಲಿ ಸಕಾರಾತ್ಮಕ ನಿಲುವು ಮೂಡಬೇಕು. ಆಗ ಮಾತ್ರ ಚುನಾವಣೆಗೆ ಅರ್ಥ ಬರುತ್ತದೆ. ಮದುಮಗ ಮತ
ದಾನ ಜಾಗೃತಿ ಮೂಡಿಸುವ ಆಲೋಚನೆ ಮಾಡಿದ್ದು ಶ್ಲಾಘನೀಯ’ ಎಂದರು.
‘ಮತದಾನದ ಕುರಿತು ಯುವಜನರಲ್ಲಿ ಉತ್ಸಾಹ ಕುಗ್ಗಿದೆ ಎಂದು ಬಹಳ ದಿನಗಳಿಂದ ಅನ್ನಿಸುತ್ತಿತ್ತು. ನನ್ನ ಮದುವೆಯಲ್ಲೇ ಏಕೆ ಜಾಗೃತಿ ಮೂಡಿಸುವ ಯತ್ನ ಮಾಡಬಾರದು ಎಂದು ನನ್ನ ತಂದೆಗೆ ಹೇಳಿದ್ದೆ. ಅವರು ಮುತುವರ್ಜಿ ವಹಿಸಿ ವೇದಿಕೆ ನಿರ್ಮಿಸಿಕೊಟ್ಟರು. ತಾಲ್ಲೂಕು ಆಡಳಿತವೂ ಕೈ ಜೋಡಿಸಿದ್ದು ಖುಷಿ ತಂದಿತು’ ಎಂದು ಎರ್ರಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ಬಿ.ಇ. ಪದವೀಧರರಾದ ಅವರು ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.