ಸಿರುಗುಪ್ಪ: ಮರಳು ಸಾಗಣೆ ನಿಷೇಧಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಬಾಗವಾಡಿ ಗ್ರಾಮಸ್ಥರು ಬುಧವಾರ ಲಾರಿಗಳನ್ನು ತಡೆದು ಪ್ರತಿಭಟಿಸಿದರು.
‘ಗ್ರಾಮಕ್ಕೆ ಕುಡಿಯುವ ನೀರಿನ ಮೂಲ ತುಂಗಭದ್ರಾ ನದಿಯಾಗಿದೆ. ಮರಳು ಸಾಗಣೆಯಿಂದ ಅಂತರ್ಜಲ ಕುಸಿಯಲಿದ್ದು, ಬೇಸಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗಲಿದೆ. ಹಾಗಾಗಿ ಮರಳು ಸಾಗಣೆಯನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
‘ಮರಳು ಸಾಗಣೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಲ್ಲದೇ, ನಿಯಮ ಪಾಲನೆಯ ನೆಪದಲ್ಲಿ ಹಾಕಿರುವ ಸಿಸಿ ಕ್ಯಾಮರಾಗಳು, ಕಂಪ್ಯೂಟರ್ ಮಾನೀಟರ್ ತೋರಿಕೆಗೆ ಮಾತ್ರ ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
‘ದಿನಕ್ಕೆ ನಿಯಮದ ಪ್ರಕಾರ ಲಾರಿಗಳಿಗೆ ಮರಳು ಸಾಗಣೆ ಅವಕಾಶ ಇರುವುದು ಬೆಳಿಗ್ಗೆ 10.30 ರಿಂದ ಸಂಜೆ 5ಗಂಟೆವರೆಗೆ ಮಾತ್ರ. ಆದರೆ, ರಾತ್ರಿವೇಳೆಯಲ್ಲೂ ಮರಳನ್ನು ಸಾಗಾಟಣೆ ಮಾಡಲಾಗುತ್ತಿದೆ. ಆನ್ಲೈನ್ ಪರ್ಮಿಟ್ ಪಡೆಯಲು ಸಾಧ್ಯವಾಗುವುದು ಕೇವಲ 50 ರಿಂದ 80 ಲಾರಿಗಳಿಗೆ ಮರುಳು ಸಾಗಣೆ ಅವಕಾಶವಿರುತ್ತದೆ. ಆದರೆ, ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ನೀಡಿರುವ ಗುತ್ತಿಗೆ ಆದೇಶ ಪ್ರತಿಯನ್ನು ತೋರಿಸಿ 580ಲಾರಿಗಳಲ್ಲಿ ಮರಳನ್ನು ಸಾಗಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಎಎಸ್ಐ ಪಂಪಾಪತಿ ಪ್ರತಿಭಟನಕಾರ ಜತೆಗೆ ಕೆಲ ಕಾಲ ವಾಗ್ವಾದ ನಡೆಯಿತು. ಬಳಿಕ ಅಧಿಕಾರಿ ಬೇಡಿಕೆಗಳನ್ನು ತಹಶೀಲ್ದಾರ ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಪಂಚಾಯ್ತಿ ಅಧ್ಯಕ್ಷ ಬಾವಿಕಟ್ಟೆ ಪಂಪನಗೌಡ ಸೇರಿ ಗ್ರಾಮಸ್ಥರು ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.