ADVERTISEMENT

ಮಸಣದಲ್ಲೊಂದು ಗುಡಿ!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 9:40 IST
Last Updated 19 ಮಾರ್ಚ್ 2018, 9:40 IST
ಕೊಟ್ಟೂರಿನ ರುದ್ರಭೂಮಿಯ ಮುಖ್ಯದ್ವಾರ
ಕೊಟ್ಟೂರಿನ ರುದ್ರಭೂಮಿಯ ಮುಖ್ಯದ್ವಾರ   

ಕೊಟ್ಟೂರು: ಕೊಟ್ಟೂರೇಶ್ವರ ರಥೋತ್ಸವದಿಂದ ಖ್ಯಾತಿಯಾಗಿರುವ ಪಟ್ಟಣ ರುದ್ರಭೂಮಿಯಲ್ಲಿ ಶಿವನ ಗುಡಿ ನಿರ್ಮಿಸುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಇಲ್ಲಿನ ಎಂಜಿನಿಯರುಗಳ ಸಂಘದ ಸದಸ್ಯರು ವೀರಶೈವ ರುದ್ರಭೂಮಿಯಲ್ಲಿ ಸದ್ದಿಲ್ಲದೆ ಗುಡಿ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದಾರೆ. ಅದರೊಂದಿಗೆ ರುದ್ರಭೂಮಿ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ. ಈಗಾಗಲೇ ರುದ್ರಭೂಮಿಯನ್ನು ಸ್ವಚ್ಛಗೊಳಿಸಿ ನೀರಿನ ತೊಟ್ಟಿ ಹಾಗೂ ರಸ್ತೆ ನಿರ್ಮಾಣ ಮಾಡಲಾಗಿದೆ. ಕೊಳವೆ ಬಾವಿ ಕೊರೆಸಿ ಆರಣ್ಯ ಇಲಾಖೆ ಸಹಕಾರದಲ್ಲಿ 230 ಸಸಿಗಳನ್ನು ನೆಡಲಾಗಿದೆ. ಅವುಗಳ ರಕ್ಷಣೆ ಸಲುವಾಗಿಯೇ ₹ 37 ಸಾವಿರ ವೆಚ್ಚದಲ್ಲಿ ಗೇಟ್ ಅಳವಡಿಸಲಾಗಿದೆ. ₹ 23 ಸಾವಿರ ವೆಚ್ಚದಲ್ಲಿ ಕಂಪೌಂಡ್ ಹಾಗೂ ಕಟ್ಟಡಗಳಿಗೆ ಬಣ್ಣ ಬಳಿಯಲಾಗಿದೆ.

‘ಪಟ್ಟಣ ಪಂಚಾಯಿತಿಯ ಅನುದಾನ ₹ 4 ಲಕ್ಷಕ್ಕೆ ಸಂಘದ ₹ 2 ಲಕ್ಷ ಸೇರಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ’ ಎಂದು ಸಂಘದ ಮುಖ್ಯಸ್ಥ ಎನ್.ಎಂ. ಗೀರೀಶ್ ತಿಳಿಸಿದರು.

ADVERTISEMENT

ಗುಡಿ ನಿರ್ಮಾಣ: ₹ 3 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗುಡಿಗೆ ದಾನಿಗಳು ದೇಣಿಗೆ ನೀಡಿದ್ದಾರೆ. ಎರಡು ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸಸಿಗಳಿಗೆ ನೀರಿನ ಅಭಾವವಾಗದಂತೆ ಹನಿ ನೀರವಾರಿ ಪದ್ಧತಿ ಆಳವಡಿಸಲಾಗುವುದು’ ಎಂದು ಸಂಘದ ಸದಸ್ಯ ಉಮೇಶ್ ಹಾಗು ಪಂಚಾಯಿತಿಯ ಕಿರಿಯ ಎಂಜನಿಯರ್ ಸಿದ್ದೇಶ್ವರ ಸ್ವಾಮಿ ತಿಳಿಸಿದರು.

ಭೋಜನಕೂಟ: ‘ಸಂಘದ ಸದಸ್ಯರು ಪ್ರತಿ ಭಾನುವಾರ ಹಾಗೂ ರಜಾ ದಿನಗಳಲ್ಲಿ ರುದ್ರಭೂಮಿಯಲ್ಲಿ ಶ್ರಮದಾನ ಮಾಡುತ್ತೇವೆ. ನಂತರ ಇಲ್ಲಿಯೇ ಭೋಜನಕೂಟ ಏರ್ಪಡಿಸುತ್ತೇವೆ’ ಎಂದು ಮತ್ತೊಬ್ಬ ಸದಸ್ಯ ಚನ್ನಮಲ್ಲಿಕಾರ್ಜುನ ಹೇಳಿದರು.

ಗೋಡೆ ಬರಹಗಳು: ರುದ್ರಭೂಮಿಯ ಕಾಂಪೌಂಡ್‌ ಗೋಡೆಯ ಮೇಲೆ ನೀತಿ ಸಂದೇಶ ಸಾರುವ ವಾಕ್ಯಗಳನ್ನೂ ಬರೆಸಲಾಗಿದ್ದು, ಅವು ನೋಡುಗರ ಗಮನ ಸೆಳೆಯುತ್ತಿವೆ. ಕೆಲವೇ ದಿನಗಳಲ್ಲಿ ಇಲ್ಲಿ ಮಾದರಿ ರುದ್ರಭೂಮಿಯಾಗಿ ಕಂಗೊಳಿಸುವ ನಿರೀಕ್ಷೆ ಇದೆ.

ಜಿ.ಕರಿಬಸವರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.