ಕಂಪ್ಲಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಬಂದಿರುವ ಇಂಡೋ ಟಿಬೆಟ್ ಗಡಿ ರಕ್ಷಣಾ ಪಡೆಯ ಸುಮಾರು 100 ಯೋಧರು ಮತ್ತು ಸ್ಥಳೀಯ ಪೊಲೀಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಸಂಜೆ ಪಥ ಸಂಚಲನ ನಡೆಸಿದರು.
ಎಪಿಎಂಸಿ ಆವರಣದಲ್ಲಿರುವ ತಾಲ್ಲೂಕು ಕಚೇರಿಯಿಂದ ಆರಂಭಗೊಂಡ ಪಥ ಸಂಚಲನ ಹಳೆ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಡಾ. ರಾಜ್ಕುಮಾರ್ ಮುಖ್ಯ ರಸ್ತೆ, ನಡುವಲ ಮಸೀದಿ, ಉದ್ಭವ ಮಹಾಗಣಪತಿ ದೇವಸ್ಥಾನ, ಗಂಗಾನಗರ, ಜೋಗಿ ಕಾಲುವೆ, ಬ್ರಾಹ್ಮಣರ ಬೀದಿ, ಸಂತೆ ಮಾರುಕಟ್ಟೆ ರಸ್ತೆ, ಸಣಾಪುರ ರಸ್ತೆ ಮೂಲಕ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಬಳಿ ಸಮಾರೋಪಗೊಂಡಿತು.
ಸಿಪಿಐ ಎಸ್.ಆರ್. ಕಾಂತರೆಡ್ಡಿ ಮಾತನಾಡಿ, ‘ಯೋಧರು, ಪೊಲೀಸರು ಶಿಸ್ತಿನ ಪಥ ಸಂಚಲನ ನಡೆಸಿ ನ್ಯಾಯಸಮ್ಮತ ಚುನಾವಣೆ ನಡೆಸಲು ಶ್ರಮಿಸುತ್ತಿದ್ದಾರೆ. ಚುನಾವಣೆ ಮುಕ್ತಾಯದವರೆಗೆ ಯೋಧರು ಇಲ್ಲಿಯೇ ಬೀಡು ಬಿಟ್ಟಿರುತ್ತಾರೆ’ ಎಂದು ತಿಳಿಸಿದರು.
ಪಿಎಸ್ಐ ಬಿ. ನಿರಂಜನ, ಇಂಡೋ ಟಿಬೆಟ್ ಗಡಿ ರಕ್ಷಣಾ ಪಡೆಯ ಅಸಿಸ್ಟೆಂಟ್ ಕಮಾಂಡರ್ ಸಂದೀಪ್ ಕಲಕಲೆ, ಇನ್ಸ್ಪೆಕ್ಟರ್ ಗೋವಿಂದ ಚಂದ್ರದಾಸ್, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳದವರು, ಚುನಾವಣಾಧಿಕಾರಿ ಅಮಿತ್ ಬಿದರಿ. ಆರ್, ಸಹಾಯಕ ಚುನಾವಣಾಧಿಕಾರಿ ಬಿ.ಆರ್.ಗೌಡ, ತಹಶೀಲ್ದಾರ್ ಬಿ. ರವೀಂದ್ರಕುಮಾರ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್, ಧರ್ಮಪಾಲ್ ಹಾಜರಿದ್ದರು.
ತಂಪು ಪಾನೀಯ ವಿತರಣೆ:
ಪಥ ಸಂಚಲನ ಸಮಾರೋಪದಲ್ಲಿ ಯೋಧರು, ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳದವರಿಗೆ ಜೈನ್ ಸೇವಾ ಟ್ರಸ್ಟ್ನವರು ತಂಪು ಪಾನೀಯ ವಿತರಿಸಿದರು. ಜೈನ್ ಸೇವಾ ಟ್ರಸ್ಟ್ ಅಧ್ಯಕ್ಷ ಶಾಂತಿಲಾಲ್ ಸಿಂಘ್ವಿ, ಮೋಹನ್ಲಾಲ್, ರಮೇಶ್ಕುಮಾರ್, ಗೌತಮ್ ಚಂದ್, ರಾಜು ಹುಂಡಿಯಾ, ಪಂಕಜ್, ನವೀನ್, ಸಜ್ಜನ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.