ADVERTISEMENT

ಸಿಬ್ಬಂದಿ ವಿರುದ್ಧ ಪಾಲಕರ ಅಸಮಾಧಾನ

ಮೊರಾರ್ಜಿ, ಆದರ್ಶ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಗೊಂದಲ, 45ನಿಮಿಷ ಪರೀಕ್ಷೆ ವಿಳಂಬ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 11:40 IST
Last Updated 6 ಮಾರ್ಚ್ 2017, 11:40 IST
ಹಗರಿಬೊಮ್ಮನಹಳ್ಳಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ಪ್ರವೇಶ ಪತ್ರಗಳಿಗೆ ನಮೂದಿಸಿದ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಕೊಠಡಿ ವ್ಯವಸ್ಥೆ ಕಲ್ಪಿಸುವಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣದ ಗಂಗಾವತಿ ಭೀಮಪ್ಪನವರ  ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಪ್ರವೇಶ ಪರೀಕ್ಷೆ 45ನಿಮಿಷ ತಡವಾಗಿ ಆರಂಭಗೊಂಡಿತು.
 
 ತಾಲ್ಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆಗೆ 1,365 ವಿದ್ಯಾರ್ಥಿಗಳು, ಆದರ್ಶ ವಿದ್ಯಾಲಯಕ್ಕೆ 1,162 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. 265 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪಟ್ಟಣದ ರೇಣುಕ ವಿದ್ಯಾಸಂಸ್ಥೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಗೆ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿತ್ತು.
 
ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೆಸರಿನ ಇಂಗ್ಲಿಷ್ ಅಕ್ಷರ ಮಾಲೆ ಆಧರಿಸಿ ಕೊಠಡಿಗಳ ವ್ಯವಸ್ಥೆ ಕಲ್ಪಿಸುವಲ್ಲಿ ಸಿಬ್ಬಂದಿ ಗೊಂದಲ ಉಂಟಾಗುವಂತೆ ಮಾಡಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಕೊಠಡಿಗಳನ್ನು ಹುಡುಕುವಲ್ಲಿ  ಹೆಣಗಾಡಿದರು.

ಕೆಲವರಿಗೆ ಅರ್ದಗಂಟೆ ಆದರೂ ಕೊಠಡಿ ಸಿಗಲಿಲ್ಲ. ಇಲಾಖೆಯ ಸಿಬ್ಬಂದಿ ಕೂಡ ಹರಸಾಹಸ ಪಟ್ಟರೂ ಕೊಠಡಿ ಸಿಗಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಪಾಲಕರು ತೀವ್ರ ಆಕ್ರೋಶಗೊಂಡರು. ಮೇಲ್ವಿಚಾರಕ ರೊಂದಿಗೆ ಮಾತಿನ ಚಕಮಕಿ ನಡೆಸಿದರು. 
 
 ಪಟ್ಟಣದ ಇತರೆ ಎರಡು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ಆರಂಭವಾದ ಸುದ್ದಿ ತಿಳಿಯುತ್ತಿದ್ದಂತೆ ಗೊಂದಲ ಸರಿಪಡಿಸಿ ಪರೀಕ್ಷೆಗೆ ಹೆಚ್ಚುವರಿ ಸಮಯ ಕಲ್ಪಿಸುವಂತೆ ನೂರಾರು ಸಂಖ್ಯೆಯ ಪಾಲಕರು ಪಟ್ಟುಹಿಡಿದರು. 
 
ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ ಸ್ಥಳಕ್ಕೆ ಭೇಟಿ ನೀಡಿದರೂ ಸಮಸ್ಯೆ ಪರಿಹಾರ ಆಗಲಿಲ್ಲ. ಆಗ ಪಾಲಕರು ಏರಿದ ಧ್ವನಿಯಲ್ಲಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. 
 
ಬಳಿಕ ಬಳ್ಳಾರಿಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರೊಂದಿಗೆ ದೂರ ವಾಣಿಯಲ್ಲಿ ಚರ್ಚಿಸಿದ ಬಳಿಕ ಬಿಇಓ ಪಾರಿ ಬಸವರಾಜ  ಅವರು ಪರೀಕ್ಷೆ ಕೇಂದ್ರದ 677 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಅರ್ಧ ಗಂಟೆ ಹೆಚ್ಚುವರಿ ಕಾಲಾವಕಾಶ       ಕಲ್ಪಿಸುವುದಾಗಿ ಪ್ರಕಟಿಸಿದಾಗ ಪರಿಸ್ಥಿತಿ ತಿಳಿಗೊಂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.