ಮರಿಯಮ್ಮನಹಳ್ಳಿ: ಸಮಾಜದಲ್ಲಿ ಉಚಿತ ಸಾಮೂಹಿಕ ಕಾರ್ಯಕ್ರಮಗಳು ಜರುಗಬೇಕಾದ ಅವಶ್ಯಕತೆ ಹೆಚ್ಚಿದ್ದು, ಇದರಿಂದ ದುಂದು ವೆಚ್ಚ ತಡೆದು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಅನುಕೂಲವಾಗುತ್ತದೆ ಎಂದು ಸಮಾಜದ ಮುಖಂಡ ಹಾಗೂ ಪಟ್ಟಣ ಪಂಚಾಯ್ತಿ ನಾಮನಿರ್ದೇಶಿತ ಸದಸ್ಯ ಎನ್.ಬುಡೇನ್ ಸಾಬ್ ಹೇಳಿದರು.
ಸ್ಥಳೀಯ ಶಾದಿಮಹಲ್ನಲ್ಲಿ ಸೋಮವಾರ ಅಂಜುಮನ್ ನೌ ಜವಾನ್ ಕಮಿಟಿಯ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ಮುಂಜಿ(ಖತ್ನ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂತಹ ಸಾಮೂಹಿಕ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಅಗತ್ಯವಾದ ಸಹಾಯ ಸಹಕಾರ ನೀಡುವುದರೊಂದಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯ ಇದೆ. ಅಲ್ಲದೆ ಪ್ರತಿಯೊಬ್ಬರು ದಾನಗುಣ ಬೆಳಸಿಕೊಳ್ಳುವುದರ ಜೊತೆಗೆ ಸೇವಾಮನೋಭಾವ ಬೆಳೆಸಿಕೊಳಸಿಕೊಂಡು ಬಡವರಿಗೆ ಆದಷ್ಟು ಸಹಾಯ ಹಸ್ತ ಚಾಚಬೇಕಿದೆ ಎಂದರು.
ಜಾಮೀಯಾ ಮಸೀದಿಯ ಮುತಾವಲಿ ಎಚ್.ಇಮಾಂ ಸಾಹೇಬ್ ಮಾತನಾಡಿ, ಕಳೆದ 19ವರ್ಷದಿಂದ ಕಮಿಟಿ ಪದಾಧಿಕಾರಿಗಳು ಸಾಮೂಹಿಕ ಮುಂಜಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದ್ದು, ಇದರಿಂದ ಸ್ಥಳೀಯರಲ್ಲದೆ, ವಿವಿಧ ಗ್ರಾಮಗಳ ನೂರಾರು ಮಕ್ಕಳು ಇದರ ಸದುಪಯೋಗ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಗುರುಗಳು, ಪಟ್ಟಣ ಪಂಚಾಯ್ತಿ ಸದಸ್ಯ ಆದಿಮನಿ ಹುಸೇನ್ ಬಾಷಾ, ಎ.ಕಾಸಿಂ ಸಾಹೇಬ್, ಶ್ಯಾಂ ಸಾಹೇಬ್, ಖಾಜಿ ಇಕ್ಬಾಲ್, ಎಚ್.ಇಸ್ಮಾಯಿಲ್, ಎಂ.ಇಮಾಂ ಅಲಿ ಸಾಬ್, ಖಾದರ್ ಸಾಬ್, ಅಂಜುಮನ್ ನೌ ಜವಾನ್ ಕಮಿಟಿಯ ಅಧ್ಯಕ್ಷ ಎ.ರೆಹಮಾನ್, ಎ.ಮೆಹಬೂಬ್ ಬಾಷ, ಎಂ.ಇಮ್ರಾನ್, ಬಿ.ಬಾಬು. ಎಚ್.ಬುಡೇನ್, ಖಾಜಾ ಮೊಹಿದ್ದೀನ್, ಬಾಷಾ ಸಾಬ್, ಶರ್ಮಾಸ್, ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ನಡೆದ ಸಾಮೂಹಿಕ ಮುಂಜಿ ಕಾರ್ಯಕ್ರಮದಲ್ಲಿ 35ಮಕ್ಕಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.