ಕೂಡ್ಲಿಗಿ: ಪಟ್ಟಣ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿದ್ದು, ಬೇಕಾ ಬಿಟ್ಟಿಯಾಗಿ ಮಣ್ಣು ಅಗೆದಿರುವ ಕಾರಣ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಕೂಡ್ಲಿಗಿಯಿಂದ ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಪಟ್ಟಣದ ದೊಡ್ಡ ಕೆರೆ ಬಳಿ ಇರುವ ಕರೆಕಲ್ಲು ಗುಡ್ಡ ಹಾಗೂ ಅದರ ಮುಂಭಾಗ, ಕೆರೆಯ ಬಳಿಯ ಕಬ್ಬಿನ ಗುಡ್ಡದಲ್ಲಿನ ಮಣ್ಣನ್ನು ರಸ್ತೆಗೆ ಹಾಕಲು ಬೃಹತ್ ಲಾರಿಗಳನ್ನು ಬಳಸಿ ಹೊತ್ತೊಯ್ಯುತ್ತಿದ್ದಾರೆ.
ಅನಾದಿ ಕಾಲದಿಂದಲೂ ಕೂಡ್ಲಿಗಿ ಪಟ್ಟಣ ಸೇರಿದಂತೆ, ಮೊರಬನಹಳ್ಳಿ, ಅಮ್ಮನ ಕೆರೆ, ಕೆ.ಕೆ. ಹಟ್ಟಿ ಗ್ರಾಮಗಳ ರೈತರು ತಮ್ಮ ಎತ್ತು, ದನ ಕರುಗಳು ಹಾಗೂ ಮೇಕೆಗಳನ್ನು ಮೇಯಿಸಲು ಈ ಗುಡ್ಡಗಳನ್ನೆ ಅವಲಂಬಿಸಿದ್ದರು. ಆದರೆ ಈಗ ರಸ್ತೆ ನಿರ್ಮಾಣಕ್ಕೆ ಯಾವುದೇ ಪರವಾನಗಿ ಇಲ್ಲದೆ ಮಣ್ಣನ್ನು ಅಗೆದು ಸಾಗಿಸ ಲಾಗುತ್ತಿದೆ. ಇದರಿಂದ ಗುಡ್ಡದಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಗಿಡ ಮರಗಳು ನೆಲಕ್ಕುರುಳಿವೆ.
ಇಲ್ಲಿ ಮೇಯಲು ಬರುವ ಜಾನು ವಾರುಗಳು ಅಥವಾ ಕುರಿ, ಮೇಕೆಗಳು ಗುಂಡಿಗಳಲ್ಲಿ ಬಿದ್ದರೆ ಮೇಲೆ ಬರಲು ಸಾಧ್ಯವಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮನ್ನೆ ಹೆದರಿಸುತ್ತಿದ್ದಾರೆ’ ಎಂದು ಸ್ಥಳೀಯರು ದೂರುತ್ತಿದ್ದಾರೆ. ಅರಣ್ಯ ಇಲಾಖೆಗೆ ಈ ವಿಷಯ ತಿಳಿಸಿದರೆ, ನಮಗೂ, ಆ ಜಾಗಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಕಂದಾಯ ಇಲಾಖೆ ಕೂಡ ನಿರ್ಲಕ್ಷ್ಯ ವಹಿ ಸಿದೆ ಎಂದು ರೈತರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.