ADVERTISEMENT

ಹೊಸಪೇಟೆ: ವಿರೋಧದ ನಡುವೆ ಅತಿಕ್ರಮಣ ತೆರವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 13:14 IST
Last Updated 1 ಅಕ್ಟೋಬರ್ 2018, 13:14 IST
ಹೊಸಪೇಟೆಯ ಸಾರ್ವಜನಿಕ ಗ್ರಂಥಾಲಯ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಗೋಡೆಯನ್ನು ನಗರಸಭೆ ಸಿಬ್ಬಂದಿ ಸೋಮವಾರ ಜೆ.ಸಿ.ಬಿ.ಯಿಂದ ತೆರವುಗೊಳಿಸಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಸಾರ್ವಜನಿಕ ಗ್ರಂಥಾಲಯ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಗೋಡೆಯನ್ನು ನಗರಸಭೆ ಸಿಬ್ಬಂದಿ ಸೋಮವಾರ ಜೆ.ಸಿ.ಬಿ.ಯಿಂದ ತೆರವುಗೊಳಿಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ನಗರದ ಸಾರ್ವಜನಿಕ ಗ್ರಂಥಾಲಯ ಬಳಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ನಿರ್ಮಿಸಿದ್ದ ಗೋಡೆಯನ್ನು ವಿರೋಧದ ನಡುವೆ ನಗರಸಭೆಯಿಂದ ಸೋಮವಾರ ತೆರವುಗೊಳಿಸಲಾಯಿತು.

ಗ್ರಂಥಾಲಯ ಸಮೀಪದ ಬೇವಿನ ಮರದ ಸುತ್ತ ಗೋಡೆ ನಿರ್ಮಿಸಲಾಗಿತ್ತು. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ನಗರಸಭೆ ಸಿಬ್ಬಂದಿ ಜೆ.ಸಿ.ಬಿ.ಯಿಂದ ತೆರವುಗೊಳಿಸಲು ಬಂದಿದ್ದರು. ಅದಕ್ಕೆ ಅಲ್ಲಿನ ಹೋಟೆಲ್‌ ಮಾಲೀಕ ಡಿ. ಅಯ್ಯಾಳಿ ಮೂರ್ತಿ ಹಾಗೂ ಅವರ ಕುಟುಂಬ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

‘ತೆರವು ಕಾರ್ಯಾಚರಣೆಗೆ ಸಹಕಾರ ನೀಡಬೇಕು’ ಎಂದು ಡಿವೈಎಸ್‌ಪಿ ಕೆ. ಶಿವಾರೆಡ್ಡಿ ಮನವಿ ಮಾಡಿದರು. ಆದರೆ, ಅದಕ್ಕೆ ಕಿವಿಗೊಡಲಿಲ್ಲ. ಅವರೊಂದಿಗೆ ವಾಗ್ವಾದಕ್ಕಿಳಿದರು. ಮಹಿಳೆಯರು ಗೋಡೆಯ ಒಳಗೆ ನಿಂತು, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು, ಅಯ್ಯಾಳಿ ಮೂರ್ತಿ ಸೇರಿದಂತೆ ಅವರ ಮನೆಯ ಸದಸ್ಯರನ್ನು ಅಲ್ಲಿಂದ ಎಳೆದೊಯ್ದರು. ಬಳಿಕ ಗೋಡೆಯನ್ನು ನೆಲಸಮಗೊಳಿಸಿದರು.

ADVERTISEMENT

‘ರಾತ್ರೋರಾತ್ರಿ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಗೋಡೆ ನಿರ್ಮಿಸಲಾಗಿದೆ. ಇದು ಕಾನೂನುಬಾಹಿರ ಕೃತ್ಯ. ಹಾಗಾಗಿ ಗೋಡೆ ತೆರವುಗೊಳಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ವಿ. ರಮೇಶ ತಿಳಿಸಿದರು.

‘ಸುತ್ತಲೂ ಗೋಡೆ ನಿರ್ಮಿಸಿದ ಸ್ಥಳದಲ್ಲಿ ಸುಂಕಲಮ್ಮ ದೇಗುಲ ಇದೆ. ಅದನ್ನು ತೆರವುಗೊಳಿಸಿದ್ದು ಸರಿಯಲ್ಲ. ಇದರ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಡಿ. ಅಯ್ಯಾಳಿ ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.