ದೇವನಹಳ್ಳಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬರ ನಿರ್ವಹಣೆ ಮತ್ತು ಕಲ್ಲು ಕೊರೆತ ಘಟಕ ವಿಷಯ ಕುರಿತು ಚರ್ಚೆಗೆ ಬಹುತೇಕ ಸಭೆಯ ಸಮಯ ಮೀಸಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಈ ಹಿಂದಿನ ಸಭೆಯ ನಡಾವಳಿ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಪಕ್ಷದ ತಾ.ಪಂ ಸ್ಥಾಯಿ ಅಮಿತಿ ಅಧ್ಯಕ್ಷ ವೆಂಕಟೇಶ್ ಮತ್ತು ವಿರೋಧ ಪಕ್ಷದ ಜೆಡಿಎಸ್ ತಾ.ಪಂ. ಸದಸ್ಯ ಕಾರಳ್ಳಿ ಶ್ರೀನಿವಾಸ ಶಾಸ್ತ್ರೀ ಮಾತನಾಡಿ ತಾಲ್ಲೂಕಿನಲ್ಲಿ 28ಕ್ಕೂ ಹೆಚ್ಚು ಇಲಾಖೆಗಳಿವೆ, ಕೇವಲ ಹತ್ತನ್ನೆರಡು ಅಧಿಕಾರಿಗಳು ಬಂದಿದ್ದಾರೆ, ಈ ಹಿಂದಿನ ಸಭೆಯಲ್ಲಿ ಇದೇ ಸ್ಥಿತಿಯಾಗಿತ್ತು. ಯಾವ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರಲ್ಲದೆ ಕಳೆದ ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರ ಬರ ನಿರ್ವಹಣೆ ಕುರಿತು ನೂರಾರು ಸಭೆ ನಡೆಸಿದ್ದಾರೆ ಎಂದರು.
ಮುಂದುವರಿದು ವಿಷಯ ಪ್ರಸ್ತಾಪಿಸಿ ಮಾತನಾಡಿದ ತಾ.ಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್ 2011ರಿಂದ ಗಣಿಗಾರಿಕೆ ನಿಲ್ಲಿಸಲಾಗಿದೆ ಎಂದು ಸರ್ಕಾರದ ಆದೇಶವಿದೆ, ಅಲ್ಪ ಸ್ವಲ್ಪ ಮರಳು ದಂಧೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಯ ಜತೆಗೆ ಕಲ್ಲು ಕೊಯ್ಲು ಘಟಕ ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ರಾತ್ರಿ ಬಿಟ್ಟು ಹಗಲು ವೇಳೆಯಲ್ಲೆ ಕಲ್ಲು ಅಕ್ರಮ ದಿಮ್ಮಿಗಳು ಸಾಗಿಸಲಾಗುತ್ತಿದೆ. ತೈಲಗೆರೆ, ಮಾಯಾಸಂದ್ರ, ಕೊಯಿರಾ ಮತ್ತು ಚಿಕ್ಕಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಪರಿಸರ, ಅಂತರ್ಜಲ ಪರಿಸ್ಥಿತಿ ಏನು ಎಂದು ತಹಶೀಲ್ದಾರ ಅವರನ್ನು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ತಹಶೀಲ್ದಾರ್ ಕಲ್ಲು ಗಣಿ ಅಕ್ರಮ ಮತ್ತು ಕಲ್ಲು ಕೊಯ್ಲು ಘಟಕ ಅಕ್ರಮದ ಬಗ್ಗೆ ಈಗಾಗಲೇ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ, ಮತ್ತೆ ನೀವು ತಿಳಿಸಿರುವ ಪ್ರದೇಶದಲ್ಲಿ ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಪಂ. ಉಪಾಧ್ಯಕ್ಷೆ ನಂದಿನಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಮೂರ್ತಿ ತಾಲ್ಲೂಕು ಪಂಚಾಯಿತಿ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.