ದೇವನಹಳ್ಳಿ: ಪಟ್ಟಣದಲ್ಲಿರುವ ಸಾರ್ವಜನಿಕರ ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ಅಧಿವೇಶನದಲ್ಲಿ ಸರ್ಕಾರದ ಮುಂದೆ ಪ್ರಸ್ತಾಪಿಸಲಾಗುವುದೆಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು 25 ಹಾಸಿಗೆಯಿಂದ 100 ಹಾಸಿಗೆಗೆ ಮೇಲ್ದರ್ಜೆಗೇರಿಸಿ ಒಂದು ದಶಕವಾಗಿದೆ. ಕೆಲ ವೈದ್ಯರು ಬಿಟ್ಟರೆ ತಜ್ಞ ವೈದ್ಯರಿಲ್ಲ, ವಿವಿಧ ರೋಗಗಳಿಗೆ ತಪಾಸಣಾ ಸಾಮಗ್ರಿಗಳಿಲ್ಲ, ಕುಡಿಯುವ ನೀರು ಉಪಹಾರ ಕೇಂದ್ರ ತುರ್ತು ಅಗತ್ಯವಿದೆ. ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ ಎಂದರು.
ಕೇಂದ್ರ ಸರ್ಕಾರ ಉತ್ತಮ ಯೋಜನೆ ಜಾರಿಗೆ ತಂದಿರುವುದರಿಂದ ಅತಿ ಕಡುಬಡವರಿಗೆ ಆರ್ಥಿಕ ಸಂಕಷ್ಟಕ್ಕೆ ನೆರವಾಗಲು ಶೇಕಡ 80 ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳ ಮಾರಾಟ ಕೇಂದ್ರ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು.
‘ಯಶಸ್ವಿ ಫೌಂಡೇಷನ್’ ಅಧ್ಯಕ್ಷ ಎಚ್.ವಿ.ಮುನಿರೆಡ್ಡಿ ಮಾತನಾಡಿ, ಭಾರತ ಸರ್ಕಾರ ದೇಶವ್ಯಾಪಿ ಮಹತ್ವವಾದ ಯೋಜನೆ ಜಾರಿಗೆ ತಂದಿದೆ. ಜಿಲ್ಲೆ ವ್ಯಾಪ್ತಿಯಲ್ಲಿ ಐದು ಕೇಂದ್ರ ಮತ್ತು ತಾಲ್ಲೂಕಿನಲ್ಲಿ ದೇವನಹಳ್ಳಿ ಮತ್ತು ವಿಜಯಪುರದಲ್ಲಿ ಆರಂಭಿಸಲಾಗುತ್ತಿದೆ. ಪ್ರತಿಷ್ಠಾನದ ಅಧ್ಯಕ್ಷ ಡಾ.ಟಿ.ವಿ. ಮುನಿಯಪ್ಪ, ಜಿ.ಪಂ. ಉಪಾಧ್ಯಕ್ಷೆ ಅನಂತಕುಮಾರಿ, ತಾ.ಪಂ. ಉಪಾಧ್ಯಕ್ಷೆ ನಂದಿನಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ, ತಾ.ಪಂ.ಸದಸ್ಯೆ ಚೈತ್ರ, ಅನ್ನಪೂರ್ಣ ಚಂದ್ರಪ್ಪ, ಶಶಿಕಲಾ, ಪುರಸಭೆ ಸದಸ್ಯ ರವೀಂದ್ರ, ಎಂ.ಕುಮಾರ್, ಅನಿಲ್ ಯಾದವ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.