ADVERTISEMENT

ಕನ್ನಡ ಪ್ರೇಮ ತೋರುವ ಚಾಲಕರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 4:12 IST
Last Updated 19 ನವೆಂಬರ್ 2017, 4:12 IST

ದೇವನಹಳ್ಳಿ: ಆಟೋಚಾಲಕರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಿರಾಶ್ರಿತರಿಗೆ ಚಳಿಗಾಲದಲ್ಲಿ ಹೊದಿಕೆ ವಿತರಿಸುತ್ತಿರುವುದು ಶ್ಲಾಘನೀಯವೆಂದು ಶ್ರೀ ಚೌಡೇಶ್ವರಿ ದೇವಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಅಶ್ವಥನಾರಾಯಣ ತಿಳಿಸಿದರು.

ಇಲ್ಲಿನ ಹಳೆ ಬಸ್‌ ನಿಲ್ದಾಣದಲ್ಲಿ ಜೈಭುವನೇಶ್ವರಿ ಆಟೋಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ 13ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾನತೆ ಇಲ್ಲದ ಸಮಾಜದಲ್ಲಿ ಅನೇಕ ಕುಟುಂಬಗಳಿಗೆ ವಸತಿ ನಿವೇಶನಗಳಿಲ್ಲ, ಆಶ್ರಯಕ್ಕಾಗಿ ದೇವಾಲಯ, ಬಸ್‌ ತಂಗುದಾಣ, ಅಶ್ವತ್ಥ ಕಟ್ಟೆ, ಚಾವಡಿಗಳನ್ನು ನಿರಾಶ್ರಿತರು ಅವಲಂಬಿಸಿದ್ದಾರೆ. ಅನೇಕರು ತುತ್ತು ಅನ್ನಕ್ಕಾಗಿ ದಿನ ನಿತ್ಯ ಭಿಕ್ಷೆ ಬೇಡುತ್ತಿದ್ದಾರೆ. ಅಂಥವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ನೆರವು ನೀಡಿ ಪ್ರೋತ್ಸಾಹ ನೀಡಬೇಕು ಎಂದರು.

ADVERTISEMENT

ಆಟೋಚಾಲಕರ ಮತ್ತು ಮಾಲಿಕರ ಸಂಘ ಗೌರವಾಧ್ಯಕ್ಷ ಬಿ.ದೇವರಾಜ್‌ ಮಾತನಾಡಿ, ಆಟೊ ಚಾಲಕರು ನಿಜವಾದ ಕನ್ನಡಾಭಿಮಾನಿಗಳು. ಅನೇಕ ಚಲನಚಿತ್ರ ನಟರ ಹೆಸರು, ಕನ್ನಡದ ಗಾದೆಗಳು, ಘೋಷವಾಕ್ಯಗಳನ್ನು ರಿಕ್ಷಾಗಳಿಗೆ ಅಳವಡಿಸಿ ಕನ್ನಡ ಪ್ರೇಮವನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂದರು.

ದೇವನಹಳ್ಳಿ ತಾಲ್ಲೂಕಿನಲ್ಲಿ ಕನ್ನಡ ಭಾಷೆಗಿಂತ ಹೆಚ್ಚು ತೆಲುಗು ಬಳಕೆಯಾಗುತ್ತಿದೆ, ಮನೆ ಭಾಷೆಯನ್ನು ಮರೆಯುತ್ತಿದ್ದೇವೆ. ದೇವನಹಳ್ಳಿ ನಗರದಲ್ಲಿ ಎರಡು ನೂರಕ್ಕೂ ಹೆಚ್ಚು ಆಟೋಗಳಿವೆ. ಪ್ರತಿಯೊಬ್ಬ ಚಾಲಕರು ಪ್ರಯಾಣಿಕರನ್ನು ಗೌರವಿಸಿ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಮನವೊಲಿಸಬೇಕು ಎಂದರು.

ಮುಖಂಡ ಜಗನ್ನಾಥ್‌ ಮಾತನಾಡಿದರು. ಸರ್ಕಲ್‌ ಇನ್‌ಸ್ಪೆಕ್ಟರ್‌ ಪಿ.ಶಿವಸ್ವಾಮಿ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ನಾಗೇಶ್‌ ಬಾಬು, ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎನ್‌.ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ರಾಜೇಶ್‌, ಎ.ಜಗದೀಶ್‌, ಕಾರ್ಯದರ್ಶಿ ಮುನಿಕೃಷ್ಣ, ಸಹಕಾರ್ಯದರ್ಶಿ ಆನಂದ್‌, ಸಂಘಟನಾ ಕಾರ್ಯದರ್ಶಿ ಗಂಗಾಧರ್‌, ಆಟೋರಾಜು, ಹನುಮಂತು, ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.