ವಿಜಯಪುರ: ಸಾಮೂಹಿಕ ಸಂಘಟನೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಮಾದಾರ ಮಹಸಭಾ ನಗರ ಘಟಕದ ನೂತನ ಅಧ್ಯಕ್ಷ ತಿರುಮಲೇಶ್ ಹೇಳಿದರು. ಇಲ್ಲಿನ ಪ್ರವಾಸಿಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಾರ ಮಹಾಸಭಾ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ನಂತರ ಮಾತನಾಡಿದರು.
ಜನಾಂಗದ ಸಂಘಟನೆಯಾಗಬೇಕು. ಪ್ರತಿಯೊಬ್ಬರಿಗೂ ವಿದ್ಯಾಭ್ಯಾಸ ಸಿಗಬೇಕು. ಸಮುದಾಯದ ಎಲ್ಲಾ ಜನರು ಸಂಘಟನೆಗೆ ಹೆಚ್ಚಿನ ಸಹಕಾರ ನೀಡಬೇಕು. ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಜನಾಂಗ ಹಾಗೂ ಜನಾಂಗದ ಮಕ್ಕಳನ್ನು ಸಂಘಟಿಸಲು ಎಲ್ಲರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಚ್.ಎಂ.ಕೃಷ್ಣಪ್ಪ ಮಾತನಾಡಿ, ಮಾದಿಗ ಸಮುದಾಯದ ಒಳಮೀಸಲಾತಿ ಸೇರಿದಂತೆ ಜನಸಂಖ್ಯಾವಾರು ಮೀಸಲಾತಿಯಲ್ಲಿ ಸೌಲಭ್ಯ ಸಿಗಬೇಕು ಎನ್ನುವ ಒತ್ತಾಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ.
ಜನಾಂಗಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ. ಈಗಾಗಲೇ ಸ್ವಾಭಿಮಾನಿ ಸಮಾವೇಶವು ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ. ಸಮುದಾಯದ ಪ್ರತಿಯೊಬ್ಬರು ಸಂಘಟಿತರಾಗಿ ಎಲ್ಲಾ ಕಡೆ ಜಾಗೃತಿ ಮೂಡಿಸಬೇಕು ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಮುನಿರಾಜು ಮಾತನಾಡಿ, ಈಗಾಗಲೇ ತಾಲ್ಲೂಕಿನಾದ್ಯಂತ ಎಲ್ಲಾ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಸದಸ್ಯತ್ವ ನೋಂದಣಿ ಕಾರ್ಯ ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಶಾಖೆಗಳನ್ನು ಮಾಡುವ ಮೂಲಕ ನೋಂದಣಿ ಅಭಿಯಾನ ಮತ್ತಷ್ಟು ಚುರುಕುಗೊಳಿಸಲಾಗುವುದು. ಸಮುದಾಯದ ಜನಾಂಗ ಹಾಗೂ ಜನರು ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಮಾದಾರ ಮಹಾಸಭಾದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಭಟ್ರೇನಹಳ್ಳಿ ನಾರಾಯಣಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟಗಿರಿಕೋಟೆ ಚಿನ್ನಪ್ಪ, ಉಪಾಧ್ಯಕ್ಷ ವೆಂಕಟಪ್ಪ, ವಿಜಯಪುರ, ಎನ್. ನರಸಿಂಹಮೂರ್ತಿ, ಗಂಗಾಧರ್, ಮುನಿಕೃಷ್ಣಪ್ಪ, ರಾಮಕೃಷ್ಣ, ಶಂಕರಪ್ಪ, ಅಶ್ವಥ್, ಮದ್ದೂರಪ್ಪ, ನಾರಾಯಣಪ್ಪ, ನರಸಿಂಹ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.