ದೇವನಹಳ್ಳಿ: ತಾಲ್ಲೂಕಿನ ಆರುವನಹಳ್ಳಿ. ಕೊಯಿರಾ, ರಾಮನಾಥಪುರ ಗ್ರಾಮ ವ್ಯಾಪ್ತಿಯಲ್ಲಿ ರೈತರ ಬೆಳೆ ನಷ್ಟದ ಬಗ್ಗೆ ಭಾನುವಾರ ಪರಿಶೀಲನೆ ನಡೆಸಿದ ಶಾಸಕ ಪಿಳ್ಳಮುನಿಶಾಮಪ್ಪ ನಷ್ಟದ ವರದಿ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಆರುವನಹಳ್ಳಿಯ ಎಂಟು ಮನೆಗಳು, ರಾಮನಾಥಪುರ ಗ್ರಾಮದಲ್ಲಿ ಎರಡು ಮನೆಗಳು ಬಿರುಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದೆ ಎಂದರು.
ಕೊಯಿರಾ ಗ್ರಾಮದ ರೈತ ದೇವರಾಜ್ ಎಂಬುವರ ಒಂದು ಎಕರೆ ಚಿಕಡಿಕಾಯಿ, ರಾಜಮ್ಮ ಎಂಬುವರ ಮೂರು ಎಕರೆ ಬೆಳೆದು ನಿಂತಿದ್ದ ಹೈಬ್ರಿಡ್ ಮುಸುಕಿನ ಜೋಳ, ರಾಜಮ್ಮರ ಒಂದು ಎಕರೆ ಟೊಮೆಟೊ, ರೈತ ರಾಜಣ್ಣರ ಅರ್ಧ ಎಕರೆ ಬೀನ್ಸ್ ನೆಲಕಚ್ಚಿದೆ ಎಂದು ವಿವರಿಸಿದರು.
ಅನೇಕ ರೈತರ ಬೆಳೆ ಅಲ್ಲಲ್ಲಿ ಹಾನಿಯಾಗಿದೆ. ನಷ್ಟವಾಗಿರುವ ಎಲ್ಲಾ ರೀತಿಯ ಬೆಳೆಗಳ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಒಂದೆರಡು ದಿನದಲ್ಲಿ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ತಿಳಿಸಲಾಗಿದೆ.
ಕನಿಷ್ಠ ₹5 ಕೋಟಿ ತುರ್ತು ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು. ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಉಪ ತಹಶೀಲ್ದಾರ್, ಗ್ರಾಮ ಲೆಕ್ಕಿಗರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.