ದೇವನಹಳ್ಳಿ: ಸಾಮಾಜಿಕ ಬದ್ಧತಾ ಕಾರ್ಯಕ್ರಮದ ಮೂಲಕ ಮಹಿಳಾ ಸಬಲೀಕರಣಕ್ಕೆ ಮಹತ್ವ ನೀಡುತ್ತಿರುವುದು ಪ್ರಶಂಸನೀಯ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ತಿಳಿಸಿದರು.
ಇಲ್ಲಿನ ಕನಕ ಭವನದಲ್ಲಿ ಭಾನುವಾರ ‘ಏರ್ ಇಂಡಿಯಾ ಸ್ಯಾಟ್ಸ್ ಏರ್ಪೋರ್ಟ್ ಸರ್ವಿಸಸ್’, ಗುಡಿಬಂಡೆ ಉನ್ನತಿ ಗ್ರಾಮೀಣ ಸಂಸ್ಥೆ ಹಾಗೂ ಯುವ ಜನ ಮತ್ತು ಮಹಿಳಾ ಅಭಿವೃದ್ಧಿ ಸಂಸ್ಥೆ, ಮಾನವ ಹಕ್ಕುಗಳ ರಕ್ಷಣಾ ಸಂಘದ ವತಿಯಿಂದ ಮೂರು ತಿಂಗಳ ಕಾಲ ನಡೆದ ಆಹಾರ ಸಂಸ್ಕರಣೆ, ಸಿದ್ಧಪಡಿಸುವಿಕೆ ಹಾಗೂ ಮಾರಾಟ ತರಬೇತಿ ಸಮಾರೋಪದಲ್ಲಿ ಮಾತನಾಡಿದರು.
52 ದೇಶೀಯ ಆಹಾರ ಪದಾರ್ಥ ಕುರಿತು ನುರಿತ ತರಬೇತಿದಾರರಿಂದ ತರಬೇತಿ ನೀಡಲಾಗಿದೆ. ಈ ಮೂಲಕ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ನೀಡಿರುವುದು ಉತ್ತಮ ಬೆಳವಣಿಗೆ ಎಂದರು. ‘ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಇನ್ನೊಬ್ಬರನ್ನು ಗೌರವಿಸುವ ವಿಚಾರದಲ್ಲಿ ಪ್ರತಿಯೊಬ್ಬರು ಚಿಂತನೆ ನಡೆಸಬೇಕು’ ಎಂದು ತಿಳಿಸಿದರು.
ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ನಾರಾಯಣಗೌಡ, ಏರ್ ಇಂಡಿಯಾ ಸ್ಯಾಟ್ಸ್ ಏರ್ ಪೋರ್ಟ್ನ ಮಾನವ ಸಂಪನ್ಮೂಲ ವಿಭಾಗದ ಸಹ ಉಪಾಧ್ಯಕ್ಷೆ ರೀನಾ ಉತ್ತಪ್ಪ, ಭದ್ರತಾ ವಿಭಾಗದ ಸಹ ಉಪಾಧ್ಯಕ್ಷ ಸುರೇಶ್ ಕುಮಾರ್, ಗ್ರಾಹಕರ ಸೇವೆ ವಿಭಾಗದ ಸಹ ಉಪಾಧ್ಯಕ್ಷ ಸತೀಶ್ ಬಾಬು, ಪುರಸಭೆ ಸದಸ್ಯ ರವೀಂದ್ರ, ಮಾನವ ಹಕ್ಕುಗಳ ರಕ್ಷಣಾ ಸಂಘ ಸಂಸ್ಥಾಪಕ ಅಧ್ಯಕ್ಷ ವಕೀಲ ವಿಶ್ವನಾಥ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.