ಕನಕಪುರ: ಒಳಚರಂಡಿ ಪೈಪ್ ಅಳವಡಿಸಿ ರಸ್ತೆಯಲ್ಲೇ ಮಣ್ಣುಬಿಟ್ಟಿರುವುದು ಮತ್ತು ಮ್ಯಾನ್ಹೋಲ್ ಸುತ್ತ ಗುಂಡಿ ಬಿಟ್ಟಿರುವುದರಿಂದ ರಸ್ತೆಯಲ್ಲಿ ಅಪಘಾತಗಳೂ ಸಂಭವಿಸುತ್ತಿವೆ ಎಂದು ನಗರದ ನೀಲಕಂಠೇಶ್ವರ ಶಾಲೆ ರಸ್ತೆಯ ನಿವಾಸಿಗಳು ಆರೋಪಿಸಿದ್ದಾರೆ.
ನಗರಸಭೆಯ 10ನೇ ವಾರ್ಡಿನಲ್ಲಿ ಬರುವ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಇಂತಹ ಸಮಸ್ಯೆ ತಲೆದೋರಿದೆ. ಕಳೆದ 15 ದಿನಗಳ ಹಿಂದೆ ಒಳಚರಂಡಿ ಪೈಪ್ ಅಳವಡಿಸಿ ಹೆಚ್ಚಾದ ಮಣ್ಣನ್ನು ರಸ್ತೆಯಲ್ಲೇ ಉಬ್ಬಿನಂತ ಬಿಟ್ಟಿರುವುದರಿಂದ ಹಾಗೂ ಮ್ಯಾನ್ಹೋಲ್ ಗುಂಡಿಯನ್ನು ಪೂರ್ಣವಾಗಿ ಮುಚ್ಚದಿರುವುದರಿಂದ ರಸ್ತೆಯಲ್ಲಿ ಓಡಾಡುವ ವಾಹನಗಳು ಅಪಘಾತಕ್ಕೀಡಾಗುತ್ತಿವೆ.
ನೀಲಕಂಠೇಶ್ವರ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಬಸ್ಸು ಮ್ಯಾನ್ಹೋಲ್ ಗುಂಡಿಗೆ ಇಳಿಸಿ ಅದೃಷ್ಟದ ರೀತಿಯಲ್ಲಿ ಪಾರಾಯಿತು. ಒಂದು ವೇಳೆ ಬಸ್ಸು ಮಗುಚಿಕೊಂಡಿದ್ದರೆ ದೊಡ್ಡ ಅನಾಹುತವೇ ಅಗುತ್ತಿತ್ತು ಎಂದು ಇಲ್ಲಿನ ಸ್ಥಳೀಯ ನಿವಾಸಿ ಕುಮಾರ್ ತಿಳಿಸಿದರು.
ರಸ್ತೆಯಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡುವುದಾಗಿ ಕಳೆದ ಎರಡು ತಿಂಗಳ ಹಿಂದೆ ರಸ್ತೆಯನ್ನು ಅಗೆಯಲಾಯಿತು. ಇಲ್ಲಿಯವರೆಗೂ ಸರಿಪಡಿಸಿಲ್ಲ, ಒಳಚರಂಡಿ ಕಾಮಗಾರಿಗೆ ರಸ್ತೆಯನ್ನು ಅಗೆದು ಪೈಪ್ ಅಳವಡಿಸಿದವರು ಸರಿಯಾಗಿ ಮುಚ್ಚದೆ ಉಬ್ಬು ಮಾಡಿರುವುದರಿಂದ ಸ್ನೇಹಿತರೊಬ್ಬರ ಕಾರಿನ ಕೆಳಭಾಗಕ್ಕೆ ಹೊಡೆದು ಸುಮಾರು ₹ 15 ಸಾವಿರದಷ್ಟು ಖರ್ಚಾಗಿದೆ, ನಗರಸಭೆಯವರು ಸರಿಪಡಿಸಬೇಕು, ಇಲ್ಲವಾದಲ್ಲಿ ಜನತೆಗೆ ಓಡಾಡಲು ತೊಂದರೆಯಾಗುತ್ತದೆ ಎಂಬುದು ಪರಮೇಶ್ ಅವರ ದೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.