ADVERTISEMENT

ಶಾಶ್ವತ ನೀರಾವರಿ ಸೌಕರ್ಯಕ್ಕೆ ಆಗ್ರಹ

ದೊಡ್ಡಬಳ್ಳಾಪುರದಿಂದ ಬೈಕ್‌ ರ‍್ಯಾ ಲಿ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳಿದ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 10:04 IST
Last Updated 5 ಅಕ್ಟೋಬರ್ 2015, 10:04 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ಶಾಶ್ವತ ನೀರಾವರಿ ಹೋರಾಟ ಸಮಿತಿಯವರು ಭಾನುವಾರ ಪ್ರವಾಸಿ ಮಂದಿರದಲ್ಲಿ ರಸ್ತೆ ತಡೆ ನಡೆಸಿ ಬೈಕ್‌ ರ‍್ಯಾ ಲಿ ಮೂಲಕ ಬಯಲು ಸೀಮೆಗೆ  ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಒಂದು ವಾರದಿಂದ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲು ತೆರಳಿದರು.

ರಸ್ತೆ ತಡೆಯಿಂದಾಗಿ ಹಿಂದೂಪುರ,ತುಮಕೂರು,ಬೆಂಗಳೂರು ಕಡೆಗೆ ಹೋಗುವ ಬಸ್‌ ಸಾಲಿನಲ್ಲಿ ನಿಂತಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಡಾ.ಪರಮಶಿವಯ್ಯ ಅವರು ಸಿದ್ಧಪಡಿಸಿರುವ ಶಾಶ್ವತ ನೀರಾವರಿ ಯೋಜನೆಯನ್ನು ಯತಾವತ್ತಾಗಿ ಅನುಷ್ಠಾನಗೊಳಿಸಬೇಕು. 

ಬಯಲು ಸೀಮೆ ಜಿಲ್ಲೆಗಳ ಜನರ ಕುಡಿಯಲು ನೀರಿಲ್ಲದೆ ಗೂಳೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಂಗ್ರೆಸ್‌ ಮುಖಂಡ ಜನಾರ್ಧನ ಪೂಜಾರಿ ಸೇರಿದಂತೆ ಕರವಾಳಿ ಭಾಗದ ಮುಖಂಡರು ದಿನಕ್ಕೊಂದು ಹೇಳಿಕೆ ನೀಡುತ್ತ ಎತ್ತಿನಹೊಳೆ, ಡಾ.ಪರಮಶಿವಯ್ಯ ಶಾಶ್ವತ ನೀರಾವರಿ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಖಂಡನೀಯ. ಚಿಕ್ಕಬಳ್ಳಾಪುರದಲ್ಲಿ ಬಯಲು ಸೀಮೆ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ ನಿರಂತವಾಗಿ ಧರಣಿ ನಡೆಯುತ್ತಿದೆ. ಈ ಹೋರಾಟವನ್ನು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು ರಸ್ತೆ ತಡೆಯಲ್ಲಿ ಭಾಗವಹಿಸಿದ್ದ ರೈತ ಸಂಘಟನೆ, ಕನ್ನಡ ಪರ ಸಂಘಟನೆಗಳ ಮುಖಂಡರು ಹೇಳಿದರು.

ಬೆಂಬಲ: ಎತ್ತಿನಹೊಳೆ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬಿಜೆಪಿ ಸದಾ ಬೆಂಬಲ ನೀಡುತ್ತಲೇ ಬಂದಿದೆ. ಈ ಭಾಗದ ಜನರ ನೀರಿನ ಹೋರಾಟಕ್ಕೆ  ಬೆಂಬಲ ಇದೆ ಎಂದು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು. 

ತೊಂದರೆ ಇಲ್ಲ: ನೇತ್ರಾವತಿ ನದಿಯಲ್ಲಿ 250 ಟಿಎಂಪಿ ನೀರು ಮಳೆಗಾಲದಲ್ಲಿ ಸಮುದ್ರ ಸೇರುತ್ತಿದೆ. ಈ ನೀರನ್ನು ಬಳಸಿಕೊಂಡು ಎತ್ತಿನ ಹೊಳೆ ಯೋಜನೆ ಹಾಗೂ ಡಾ.ಪರಮಶಿವಯ್ಯ ಅವರ ಶಾಶ್ವತ ನೀರಾವರಿ ಯೋಜನೆ ಮುಂದುವರೆಸಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆ ಆಗದು ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ‘ನೀರಾವರಿ ಯೋಜನೆಗಳಿಂದ ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆ ನೀರನ್ನೇ ಸಂಗ್ರಹಿಸಲಾಗುತ್ತದೆ. ಗುಂಡ್ಯಹಳ್ಳವನ್ನು ಸೇರುವ ಎತ್ತಿನಹಳ್ಳ ಬೇಸಿಗೆಯಲ್ಲಿ ಒಳಗಿರುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಈ ತೊರೆಗೆ ಸಕಲೇಶಪುರ ಸಮೀಪ ಅಣೆಕಟ್ಟು ಕಟ್ಟಿ ಮಳೆಗಾಲದ ನೀರನ್ನು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದರಿಂದ ಕರಾವಳಿ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

ಅವರ ಶಾಶ್ವತ ನೀರಾವರಿ ಯೋಜನೆ ಕುರಿತಂತೆ ಸಿಪಿಎಂ ಕರವಾಳಿ ಸೇರಿದಂತೆ ಯಾವುದೇ ಭಾಗದ ಸಭೆಗಳಲ್ಲೂ ಒಂದೇ ನೀಲುವನ್ನು ಹೊಂದಿದೆ. ಆದರೆ ಕಾಂಗ್ರೆಸ್‌,ಬಿಜೆಪಿ ಮುಖಂಡರು ಮಂಗಳೂರಿನ ಸಭೆಗಳಲ್ಲಿ ಅಲ್ಲಿನ ಜನರನ್ನು ಮೆಚ್ಚಿಸಲು ಯೋಜನೆಯ ವಿರೋಧವಾಗಿ ಹೇಳಿಕೆ ನೀಡುತ್ತಾರೆ. ಬಯಲು ಸೀಮೆ ಜಿಲ್ಲೆಗಳ ಜನರನ್ನು ಮೆಚ್ಚಿ ಯೋಜನೆಯ ಪರವಾಗಿ ಮಾತನಾಡಿ ಜನರಿಂದ ಚಪ್ಪಾಳೆ ಗಿಟ್ಟಿಸುವ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕು ಎಂದು ಹೇಳಿದರು.

***
ಶಾಶ್ವತ ನೀರಾವರಿ ಯೋಜನೆ ಕುರಿತು ಸಿಪಿಎಂ ಕರವಾಳಿ ಸೇರಿದಂತೆ ಯಾವುದೇ ಭಾಗದ ಸಭೆಗಳಲ್ಲೂ ಒಂದೇ ನೀಲುವನ್ನು ಹೊಂದಿದೆ.
-ಆರ್‌.ಚಂದ್ರತೇಜಸ್ವಿ, 
ಸಿಪಿಎಂ ಜಿಲ್ಲಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT