ADVERTISEMENT

‘ಸಂವಿಧಾನದ ಬುನಾದಿ ಭದ್ರಗೊಳಿಸಿ’

ದೇವನಹಳ್ಳಿ: ಡಾ.ಬಿ.ಆರ್‌.ಅಂಬೇಡ್ಕರ್ ಮಹಾ‌ಪರಿನಿರ್ವಾಣ ದಿನ, ಗಣ್ಯರ ಪುಷ್ಪ ನಮನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 5:52 IST
Last Updated 7 ಡಿಸೆಂಬರ್ 2017, 5:52 IST
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಭಾವಚಿತ್ರಕ್ಕೆ ಶಾಸಕ ಪಿಳ್ಳಮುನಿಶಾಮಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಪುಷ್ಪನಮನ ಸಲ್ಲಿಸಿದರು
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಭಾವಚಿತ್ರಕ್ಕೆ ಶಾಸಕ ಪಿಳ್ಳಮುನಿಶಾಮಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಪುಷ್ಪನಮನ ಸಲ್ಲಿಸಿದರು   

ದೇವನಹಳ್ಳಿ: ‘ಶತ ಶತಮಾನಗಳಿಂದ ಶೋಷಿತರಾಗಿದ್ದ ಸಾವಿರಾರು ಜಾತಿಗಳ ಸಮುದಾಯಕ್ಕೆ ಸಂವಿಧಾನದ ಮೂಲಕ ಬೆಳಕು ನೀಡಿದ ಮಹಾಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.

ಮಿನಿ ವಿಧಾನಸೌಧ ಆವರಣದಲ್ಲಿ ಬುಧವಾರ ಡಾ. ಬಿ.ಆರ್.ಅಂಬೇಡ್ಕರ್ ರವರ 61ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

‘ಡಿ.6 ರಂದು ರಾಷ್ಟ್ರದ ಮಹಾನ್ ನಾಯಕ ಅಗಲಿದ ದಿನ. ಸಂವಿಧಾನದ ಮೂಲ ಆಶಯ ಅರ್ಥೈಸಿಕೊಳ್ಳದ ಕೆಲವರು ಸಂವಿಧಾನ ಅಂಬೇಡ್ಕರ್ ರಚಿಸಿಲ್ಲ ಎಂದು ಹೇಳುತ್ತಾರೆ. ಸಂವಿಧಾನ ರಚಿಸಿದ ಸಂದರ್ಭದಲ್ಲಿ ಇತಿಹಾಸ ನೋಡಬೇಕಾಗಿದೆ’ ಎಂದರು.

ADVERTISEMENT

ಸಂವಿಧಾನ ಗಟ್ಟಿಗೊಳಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಉಳಿಯಲು ಸಾಧ್ಯ. ಡಿ.6 ಮತ್ತು ಏ.14 ರಂದು ಶೋಷಿತ ಸಮುದಾಯ ಶಾಶ್ವತವಾಗಿ ನೆನಪಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಮತ್ತು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಬಿ.ಮುನೆಗೌಡ ಮಾತನಾಡಿ, ಪ್ರತಿಯೊಂದು ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಮೂಲಕ ಸಮಾನತೆ ದಿಟ್ಟ ಹೆಜ್ಜೆ ಇಟ್ಟ ಮಹಾನ್ ವ್ಯಕ್ತಿ. ದೇಶ, ಸಮಾಜ, ಸಮುದಾಯಕ್ಕೆ ತ್ಯಾಗ ಮಾಡಿದವರನ್ನು ನೆನಪಿಸುವುದು ಎಲ್ಲರ ಕರ್ತವ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್ ಸಾಮಾನ್ಯ ವ್ಯಕ್ತಿತ್ವ ಹೊಂದಿರಲಿಲ್ಲ.  ಅವರೊಬ್ಬ ಮಹಾನ್ ಮಾನವತಾವಾದಿ. ಅನೇಕ ಸಂಕಷ್ಟಗಳನ್ನು ಎದುರಿಸಿ ಶಿಕ್ಷಣ ಪಡೆದು ಅನೇಕ ಪದವಿ ಗಳಿಸಿ ವಿಶ್ವಮಾನ್ಯರಾಗಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಲೋಕೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ನಂದಿನಿ, ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ಜಿ.ಮಾರಪ್ಪ, ಮುಖಂಡ ಗುರಪ್ಪ ಮಾತನಾಡಿದರು.

ಪ್ರಜಾ ವಿಮೋಚನ ಬಹುಜನ ಸಮಿತಿ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಬಿಜ್ಜವಾರ ನಾಗರಾಜ್, ಭೂ ನ್ಯಾಯ ಮಂಡಳಿ ಸದಸ್ಯ ಮುನಿರಾಜು, ಚಲವಾದಿ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ಮುನಿರಾಜು, ಮುಖಂಡ ನಾಗರಾಜು, ಎಂ.ಶ್ರೀನಿವಾಸ್, ಗ್ರೇಡ್–2 ತಹಶೀಲ್ದಾರ್ ತುಳಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.