ದೇವನಹಳ್ಳಿ: ತಾಲ್ಲೂಕಿನಲ್ಲಿ ಪ್ರತಿಯೊಂದು ಶಾಲೆಗಳು ರಾಜ್ಯ ಮಟ್ಟದಲ್ಲಿ ಮಾದರಿಯಾಗಲು ಪ್ರಯತ್ನ ಪಡಬೇಕಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಕೆ.ಸಿ.ಮಂಜುನಾಥ್ ತಿಳಿಸಿದರು.
ಇಲ್ಲಿನ ಬೈಚಾಪುರ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉದಯ ಸಿರಿಕನ್ನಡ ಯುವಕರ ಸಂಘದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆ ವಿಷಯದ ಬೋಧನೆಯಲ್ಲಿ ವ್ಯಾಕರಣಕ್ಕೆ ಒತ್ತು ನೀಡಬೇಕು. ಮೂಲ ಕನ್ನಡ ಭಾಷೆ ಯಥಾವತ್ತಾಗಿ ಉಳಿಸುವ ಪ್ರಯತ್ನ ಮಾಡಬೇಕು ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ನಮ್ಮ ನೆಲದ ಭಾಷೆ ಕನ್ನಡ ತಾಯಿಯಾದರೆ ಇತರೆ ಭಾಷೆ ಸಹೋದರ ಸಂಬಂಧಿಗಳಿದ್ದಂತೆ. ಕನ್ನಡ ಆಡಳಿತ ಭಾಷೆಯಾಗಿದ್ದರೂ ಶೇ 100 ರಷ್ಟು ಪರಿಪೂರ್ಣವಾಗಿ ಜಾರಿಯಾಗಿಲ್ಲ. ಸ್ವಚ್ಛತೆ, ಪರಿಸರ ಸಂರಕ್ಷಣೆ ಪ್ರಾಯೋಗಿಕ ಕಲಿಕೆಯಿಂದಾಗಿ ಬೈಚಾಪುರ ಶಾಲೆ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿರುವುದು ಇತರ ಶಾಲೆಗಳಿಗೆ ಮಾದರಿಯಾಗಿದೆ’ ಎಂದರು.
ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್ ಮಾತನಾಡಿ, ಕನ್ನಡ ಎಂದರೆ ಬರಿ ಕನ್ನಡವಲ್ಲ ಎಂಬ ಕವಿವಾಣಿಯಲ್ಲಿ ಅರ್ಥವಿದೆ. ಸಾಹಿತಿಗಳು, ಕಲಾವಿದರು, ಹೋರಾಟಗಾರರು, ಪ್ರಗತಿಪರ ಸಂಘಟನೆಗಳುನಾಡು, ನುಡಿ ಉಳಿಸುವ ಪ್ರಯತ್ನ ಮಾಡಬೇಕು. ರಾಜ್ಯೋತ್ಸವ ಎಂಬುದು ಕೇವಲ ಕಾರ್ಯಕ್ರಮ ಆಗಬಾರದು ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪುರುಷೋತ್ತಮ್ ಕುಮಾರ್, ಮುಖಂಡರಾದ ಸಿ. ಜಗನ್ನಾಥ್, ಎಂ.ನಾರಾಯಣಸ್ವಾಮಿ, ಭುವನಹಳ್ಳಿ ಮುನಿರಾಜು, ವಿಜಯಪುರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ಕಾಂಗ್ರೆಸ್ ಎಸ್ಸಿ ಘಟಕ ತಾಲ್ಲೂಕು ಅಧ್ಯಕ್ಷ ಬೈಚಾಪುರ ರಾಜಣ್ಣ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಮಾರುತಿ, ಕಿಸಾನ್ ಖೇತ್ ಕಾಂಗ್ರೆಸ್ ಘಟಕ ಅಧ್ಯಕ್ಷ ಮಿಥುನ್, ಉದಯ ಸಿರಿಗನ್ನಡ ಯುವಕ ಸಂಘ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.