ದೊಡ್ಡಬಳ್ಳಾಪುರ: ಶಾಲಾ, ಕಾಲೇಜು ಮಕ್ಕಳು ಓದಿನ ಜೊತೆಗೆ ಕೃಷಿ ಜ್ಞಾನವನ್ನು ಪಡೆದುಕೊಳ್ಳುವುದರಿಂದ ಉತ್ತಮ ಬೆಳೆ ಬೆಳೆದು ಲಾಭದಾಯಕ ಕೃಷಿ ಪದ್ಧತಿಯನ್ನು ಪಡೆದು ಕೊಳ್ಳಬಹುದು ಎಂದು ಸಮಗ್ರ ಕೃಷಿ ತಜ್ಞಕುಂಟನಹಳ್ಳಿ ಲಕ್ಷ್ಮೇಗೌಡ ಹೇಳಿದರು.
ಅವರು ಕೊಂಗಾಡಿಯಪ್ಪ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಯುವ ಸಂಚಲನ ಸಮಿತಿ ವತಿಯಿಂದ ತಾಲ್ಲೂಕಿನ ಕುಂಟನಹಳ್ಳಿ ಗ್ರಾಮದ ಲಕ್ಷ್ಮೇಗೌಡ ಅವರ ತೋಟದಲ್ಲಿ ಕೃಷಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಿ ಬದುಕಲು ಕೃಷಿ ಸಹಾಯ ಮಾಡುತ್ತದೆ. ಕೃಷಿಕ ಸಾಧನೆ ಮಾಡಿದರೆ ಫಲ ಸಿಗುತ್ತದೆ. ನನ್ನ ಬಿಡುವಿನ ವೇಳೆಯಲ್ಲಿ ಜೇನು ಸಾಕಣೆ ಮಾಡಿ ಮನೆ ಕಟ್ಟಿಕೊಂಡಿದ್ದೇನೆ, ಹಲವಾರು ಪ್ರಶಸ್ತಿಗಳು ಬಂದಿವೆ ಎಂದರು.
ಯುವ ಸಂಚಲನದ ಚಿದಾನಂದ ಮಾತನಾಡಿ ನೆಲ, ಜಲವನ್ನು ಅವಲಂಬಿಸಿರುವ ಕೃಷಿಕ ಬದುಕ ಬೇಕಾದರೆ ನೈಸರ್ಗಿಕ ಸಂಪನ್ಮೂಲಗಳನ್ನು ತುಂಬಾ ಎಚ್ಚರದಿಂದ ಕಾಪಾಡ ಬೇಕಾಗುತ್ತದೆ ಎಂದರು.
ಎನ್.ಎಸ್.ಎಸ್. ಅಧಿಕಾರಿ ಪ್ರೊ.ಚಂದ್ರಪ್ಪ ಮಾತನಾಡಿ, ಯುವ ಪೀಳಿಗೆ ರೈತರ ಬದುಕನ್ನು ಕೇವಲವಾಗಿ ನೋಡುತ್ತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಓದಿದವರಿಗೆಲ್ಲಾ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದರು.
ರೈತ ಹೋರಾಟಗಾರ ಅರಳುಮಲ್ಲಿಗೆ ಕೇಶವಮೂರ್ತಿ, ಎನ್.ಎಸ್.ಎಸ್. ಸಹಾಯಕ ಅಧಿಕಾರಿ ಪ್ರವೀಣ್ ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಸಾವಯವ ಕೃಷಿ ಜಾಥಾ ನಡೆಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳು ಜೇನು ಸಾಕಾಣಿಕೆ ಮತ್ತು ಕೃಷಿ ಹೊಂಡ ವೀಕ್ಷಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.